Monday, August 22, 2011

ಜೈಲು ... !!!

ಊರ ಹೊರಗಿನ ಹನುಮಪ್ಪನ ಗುಡಿ ದಾಟಿ ಸ್ವಲ್ಪ ಮುಂದೆ ಹೋದರೆ ಬಳೆಗಾರ ಶೆಟ್ಟರ ಕೆಂಗಾಡು ಹೊಲ...ಅಲ್ಲಿಂದ ಮುಂದೆ ಇರುವ ದಿಬ್ಬ ಹತ್ತಿ ಅಲ್ಲೇ ಪಕ್ಕದಲ್ಲೇ ಒಂದು ಎತ್ತಿನ ಗಾಡಿ ಹೋಗುವಷ್ಟು ಅಗಲವಾದ ಓಣಿ.. ಒಂದು ಫರ್ ಲಾಂಗ್ ಸಾಗಿದರೆ ಊರಿನವರೆಲ್ಲ ತಮ್ಮ ದನ ಕರುಗಳನ್ನು ಮೈ ತೊಳೆಯುವ ಚಿಕ್ಕದಾದ ಕಟ್ಟೆ ,ಅದರ ಹೆಸರು ಕೆಂಚನ ಕಟ್ಟೆ... ಕೆಲವು ಚಿಕ್ಕ ಮಕ್ಕಳು ಅಲ್ಲೇ ಈಜು ಆಡುತ್ತಾರೆ..ಅದೇಗೆ ಅದರಲ್ಲಿ ಬೀಳುತ್ತಾರೋ ಆ ಹನುಮಪ್ಪನೆ ಬಲ್ಲ.. ಪಕ್ಕದಲ್ಲೇ ಛೇರ್ಮನ್ ಮಲ್ಲೇಗೌಡರ ಜಮೀನು...ಇದು ಮುಂಚೆ ಗೋಮಾಳ ಆಗಿತ್ತಂತೆ... ಮಲ್ಲೇಗೌಡ ಛೇರ್ಮನ್ ಆದಮೇಲೆ ತನ್ನ ಹೆಸರಿಗೆ ಮಾಡಿಸಿಕೊಂಡ ಅಂತ ಉರವರೆಲ್ಲ ಹೇಳ್ತಾರೆ.... ಒಂದಾನೊಂದು ಕಾಲದ ಆ ಗೋಮಾಳ ಬಿಟ್ಟು ಮುಂದೆ ಹೋಗುತ್ತಾ ಎಡಗಡೆ ನೋಡಿದರೆ  ಮಾರಮ್ಮ ದೇವಸ್ಥಾನ ಇರುವ ಬೆಟ್ಟ. ದೇವಸ್ಥಾನ ದಿಂದ ಇನ್ನು ಮೇಲಕ್ಕೆ ಹೋದರೆ ಅದು ಕೋಡುಗಲ್ಲು .... ಆ ಗೋಮಾಳದಿಂದ ಮುಂದೆ ಹೋಗಿ ಅಲ್ಲೇ ಸ್ವಲ್ಪ ಎಡಗಡೆ,ಬೆಟ್ಟದ ಹಿಂದೆ ಬೆಸ್ತರ ಹಟ್ಟಿ ರಾಮಯ್ಯನ ಹೊಲ....

ರಾಮಯ್ಯ ತನ್ನ ವಂಶ ಪರಂಪರೆ ಅಂತೆ ಮೀನು ಹಿಡಿದು ಮಾರಿ ಜೀವನ ಸಾಗಿಸುತ್ತಿದ್ದಾನೆ..ಜೊತೆಗೆ ಸ್ವಲ್ಪ ಜಮೀನು ಇದೆ,ಮಳೆಗಾಲದಲ್ಲಿ ಅದು ಇದು ಬೆಳೆ ತೆಗೆಯುತ್ತಾನೆ,ಜೊತೆಗೆ ೨ ಹಸು ಮತ್ತು ಒಂದು ಜೊತೆ ಎತ್ತು ಇದೆ....ತನ್ನ ಎತ್ತಿನಲ್ಲಿ ತನ್ನ ಜಮೀನು ಅಲ್ಲದೆ ಬೇರೆಯವರ ಹೊಲದಲ್ಲಿ ಬೇಸಾಯ ಮಾಡಿ ಕೂಲಿ ತೆಗೆದು ಕೊಂಡು ಹೇಗೋ  ಸಂಪಾದನೆ ಮಾಡಿ ತನ್ನ ಇಬ್ಬರು ಮಕ್ಕಳನ್ನು ಓದಿಸುತ್ತಿದ್ದಾನೆ... ಇವನ ಮನೆ ಇರುವುದು ಭೈರಾಪುರದ ಹೊರ ಭಾಗದಲ್ಲಿ,ಬೆಸ್ತರ ಹಟ್ಟಿ ಅಂತ ಕರೆಯಲ್ಪಡುವ ಒಂದು ಕಾಲೋನಿ... ಅಲ್ಲಿ ರಾಮಯ್ಯ ಬಿಟ್ಟರೆ ಇನ್ನು ಯಾರು ತಮ್ಮ ಪೂರ್ವಜರ ವೃತ್ತಿಯನ್ನು ನಡೆಸಿಕೊಂಡು ಬಂದಿಲ್ಲ...

ಅದು ಗುರುವಾರ...ಭೈರಾಪುರದಿಂದ ೪ ಕಿಮಿ ದೂರ ಇರುವ ಸಿಂಗನೂರಿನಲ್ಲಿ ವಾರದ ಸಂತೆ... ಬೇರೆ ದಿನ ಯಾರದಾದರೂ ತೋಟದಲ್ಲಿ ಕೂಲಿ ಹೋಗುವ ರಾಮಯ್ಯ ಗುರುವಾರ ಯಾವುದೇ ಕಾರಣಕ್ಕೂ ಹೋಗಲ್ಲ...ಅವತ್ತು ಸಂತೆಗೆ ಬೆಳ್ಳಗೆ ಬೇಗನೆ ಎದ್ದು  ಮೀನು ಮಾರಲು ಹೋಗುತ್ತಾನೆ.... ತನ್ನ ವ್ಯಾಪಾರ ವಹಿವಾಟು ಮುಗಿದ ಮೇಲೆ ತನ್ನ ಹೆಂಡತಿಗೆ ದುಡ್ಡು ಕೊಟ್ಟು ಸಂತೆ ಮಾಡಲು ಕಳುಹಿಸುತ್ತಾನೆ.... ಹೆಣ್ಣು ಮಕ್ಕಳೇ ಸಂತೆ ಮಾಡಿದರೆ ಸರಿ,ಮನೆಗೆ ಏನೇನ್ ಬೇಕೋ ಅವರಿಗೆ ಚೆನ್ನಾಗಿ ಗೊತ್ತಿರದು ಅಲ್ವೇ?.ರಾಮಯ್ಯನ ಹೆಂಡತಿ ಪುಟ್ಟವ್ವ ಪ್ರತಿ ವಾರ ಮಧ್ಯಾನದ ವೇಳೆಗೆ ಅಕ್ಕ ಪಕ್ಕದ ಮನೆಯ ಹೆಣ್ಣು ಮಕ್ಕಳೊಂದಿಗೆ ಜೊತೆ ಗೂಡಿ ಸಂತೆ ಮಾಡಲು ನಡೆದೇ ಹೋಗುತ್ತಾರೆ....

ಅವತ್ತು ಮಾತ್ರ ತನಗೆ ಗ್ರಾಮ ಲೆಕ್ಕಾಧಿಕಾರಿ  ಹತ್ತಿರ ತನ್ನ ಜಮೀನಿಗೆ  ಸಂಭಂದ ಪಟ್ಟ ಕೆಲಸ ಇದ್ದರಿಂದ ಮತ್ತು ಆ ಪುಣ್ಯಾತ್ಮ ವಾರಕ್ಕೆ ಒಂದೇ ದಿನ ಕೈಗೆ ಸಿಗುವುದರಿಂದ  ಅವತ್ತೇ ಆ ಕೆಲಸ ಮಾಡಿಸಿ ಕೊಳ್ಳಬೇಕಿತ್ತು  ... ಸಂತೆ ಬೇರೆ,ತುಂಬ ಜನ ಇರುತ್ತಾರೆ,ಎಷ್ಟೊತ್ತು ಆಗುತ್ತೋ ಏನೋ ಎಂದು ತಿಳಿದು ತನ್ನ ಹೆಂಡತಿಗೆ ಇವತ್ತು ಪೇಟೆಯಲ್ಲಿ ನನಗೆ ಸ್ವಲ್ಪ ಕೆಲಸ ಇದೆ,ನಾನು ಬರುವುದು  ಲೇಟ್ ಆಗಬಹುದು...ನೀನು ಹಸುಗಳನ್ನು ಮೇಯಿಸುತ್ತಿರು,ಹಂಗೆ ಏನೇನ್ ತರ್ಬೇಕೋ ಒಂದು ಚೀಟಿ ಬರೆದು ಕೋಡು...ಇವತ್ತು ನಾನೇ ಸಂತೆ ಮಾಡ್ಕಂಡ್ ಬರುತ್ತೀನಿ ಅಂತ ಹೇಳಿ ಚೀಟಿ ತೆಗೆದು ಕೊಂಡು ಮೀನು ಮಾರಲು ಹೋದ...ಹೀಗೆ ಯಾವುದೇ ರೀತಿಯ ಅನುಮಾನ ಪಡದೆ  ಹೇಳಿ ಹೋದ ರಾಮಯ್ಯನಿಗೆ  ತಾನು ಅಕಸ್ಮಾತ್ ಬೇಗ ಬಂದರೆ ತನ್ನ ಹೆಂಡತಿಯ ಇನ್ನೊಂದು ಮುಖ ತಿಳಿಯುತ್ತದೆ ಎಂದು ಭಾವಿಸಿರಲಿಲ್ಲ...

ಜೆಲೇಬಿ ಮೀನು,ಹಾವು  ಮೀನು,ಕಾಟ್ಲ, ಮೀಸೆ ಮೀನು,ಗೆಂಡೆ ಮೆನು  ಎಲ್ಲವನ್ನು ಮಾರಿ ಆ ಗ್ರಾಮ ಲೆಕ್ಕಿಗನಿಗೆ ಹಂಗೆ ಒಂದು ಗಾಂಧೀ ಪೇಪರ್ ಕೊಟ್ಟು ತನ್ನ ಕೆಲಸವನ್ನು ಸ್ವಲ್ಪ ಸಲೀಸಾಗಿ ಮತ್ತು  ಬೇಗ  ಮುಗಿಸಿಕೊಂಡು,ಹೇಗೂ ಇನ್ನೂ ಸಮಯ ಇದೆ ,ಅವಳೇ ಸಂತೆ ಮಾಡಿದರೆ ಸರಿ,ಆಮೇಲೆ ಸುಮ್ನೆ ಅದು ತಂದಿಲ್ಲ,ಇದು ಬೇಡವಾಗಿತ್ತು ಅಂತ ರಗಳೆ ಯಾಕೆ,ಅವಳನ್ನೇ ಕಳಿಸಿದರಾಯಿತು ಅಂತ ಹಾಗೆ ಸ್ವಾರ್ಣಲೋಕ ಬಾರ್  ಕಡೆ ಹೆಜ್ಜೆ ಹಾಕಿ ಸಂಜೆಗೆ ಮೀನಿನ ಫ್ರೈ ಜೊತೆ ಬೇಕಾಗುತ್ತೆ ಅಂತ ಎರಡು ಕ್ವಾಟರ್ MC ವಿಸ್ಕಿ ತೆಗೆದು ಕೊಂಡು ಮೀನು ತಂದಿದ್ದ ಕುಕ್ಕೆಯಲ್ಲಿದ್ದ ತಕ್ಕಡಿಯಲ್ಲಿಟ್ಟು ಮನೆ ಕಡೆ ಹೊರಟ....ಬೇರೆ ದಿನ ಪ್ಯಾಕೆಟ್ ಸಾರಾಯಿ ಕುಡಿಯವ ರಾಮಯ್ಯ ಮೀನಿನ ವ್ಯಾಪಾರ ಜೋರಾಗಿತ್ತು ಅನ್ಸುತ್ತೆ ಅವತ್ತು ಮಾತ್ರ ಬಾರಿಗೆ ಹೋಗಿ ವಿಸ್ಕಿ ಕೊಂಡ.... ಜೇಬಲ್ಲಿ ದುಡ್ಡಿದ್ದರೆ ತೂಕ ಅಲ್ವ? ಅಲ್ಲದೆ ದುಡ್ಡು  ಜೇಬಲ್ಲಿ ಕುಣಿಯುತ್ತೆ ಬೇರೆ....

ಇತ್ತ ಪುಟ್ಟವ್ವ ಹಾಲು ಕರೆದು ಡೈರಿಗೆ ಹಾಕಿ ಬಂದು ಮಕ್ಕಳಿಗೆ ತಿಂಡಿ ಮಾಡಿ ಕೊಟ್ಟು ಅವರನ್ನು ಶಾಲೆಗೆ ಕಳಿಸಿ ಹೇಗೂ ಇವರೇ ಸಂತೆ ಮಾಡ್ಕೊಂಡು ಬರುತ್ತಾರೆ,ಹೊಲ ಬೇರೆ ಅಷ್ಟೂ ದೂರ ಅಂತ ಮಧ್ಯಾನಕ್ಕೆ  ಬುಟ್ಟಿ ಕಟ್ಟಿಕೊಂಡು   ಹಸುಗಳನ್ನು ಮೇಯಿಸುವುದಕ್ಕೆ  ಹೋಗಿದ್ದಾಳೆ....

ಇತ್ತ  ರಾಮಯ್ಯ ಮನೆಗೆ ಬಂದವನೇ ತಂದಿದ್ದ ಬಾಟಲಿಗಳನ್ನು ಅಟ್ಟದ ಮೇಲಿಟ್ಟು ಹೆಂಡತಿಯನ್ನು ಸಂತೆಗೆ ಕಳುಹಿಸುವ ಸಲುವಾಗಿ  ಹೊಲದ ಕಡೆ ಹೆಜ್ಜೆ ಹಾಕ ತೊಡಗಿದ...ತನ್ನ ಹೊಲದಲ್ಲಿ ಮಧ್ಯದಲ್ಲಿ ತೆಂಗಿನ ಗರಿ ಇಂದ ಒಂದು ಸಣ್ಣ ಗುಡಿಸಲು ಕಟ್ಟಿದ್ದಾನೆ,ಇಟ್ಟಿಗೆ ಇಂದ ಕಟ್ಟಿಸುವಷ್ಟು  ಶಕ್ತನಲ್ಲ ಹಾಗಾಗಿ...ಸೀದಾ ಬಂದವನೇ ಅತ್ತಿತ್ತ ಕಣ್ಣಾಯಿಸಿ ಹಸುಗಳನ್ನು ಕಟ್ಟಿದ್ದ
ಜಾಗಕ್ಕೆ ಹೋಗಿ,ಮತ್ತೊಮ್ಮೆ ಜೋಳದ ಮೇವು ಕೂಯ್ದು ಅವುಗಳಿಗೆ ಹಾಕಿ ಹೆಂಡತಿಯನ್ನು ಹುಡುಕಿದ,ಬಹುಷಃ ಗುಡಿಸಿಲಿನಲ್ಲಿ ಇರಬಹುದು ಎಂದು ಅತ್ತ ಹೊರಟ.... ಮಾರಮ್ಮ ಬೆಟ್ಟದ ಕೋಡುಗಲ್ಲಿನ ಮೇಲೆ ಇರುವ ಬೃಹದಾಕಾರದ ಒಂದು ಬಂಡೆ,ಚಿಕ್ಕವನಾಗಿದ್ದಾಗಿಂದಲೂ ಅದು ಹೇಗೆ ಪುಟ್ಟ ಪುಟ್ಟ ಬಂಡೆಗಳ ಮೇಲೆ ಕೂತಿದೆ ಎಂದು ಯೋಚಿಸುತ್ತಿದ್ದ ರಾಮಯ್ಯನಿಗೆ ಆ ದೊಡ್ಡ ಬಂಡೆ ಸೀದಾ ತನ್ನ ಮೇಲೆ ಉರುಳುತ್ತಿರುವಂತೆ ಭಾಸವಾಯಿತು....

 ತನ್ನ ಹೊಲದ ಪಕ್ಕದಲ್ಲೇ ಕಬ್ಬಿನ ಗದ್ದೆ ಮತ್ತು ಬಾಳೆ ತೋಟ,ಅಲ್ಲಿಂದ ಮುಂದೆ ಹೋದರೆ ಚೋಮನ ದೇವರ ಗುಡಿ ಇರುವ ಒಂದು  ಗುತ್ತಿ,ಅಲ್ಲೇ ಮುಂದೆ ಸಾಗಿದರೆ ಸಿಗುವ ಕಾಗೆ ಹಳ್ಳ ದಾಟಿ ಅರ್ಧ ಮೈಲಿ ಹೋದರೆ ೨೦ ಮನೆ ಇರುವ  ಕುಂಚನಗೆರೆ ಗ್ರಾಮ....ಆ ಕಬ್ಬಿನ ಗದ್ದೆ ಮತ್ತು ಬಾಳೆ ತೋಟ ಆ ಕುಂಚನಗೆರೆ ಪಟೇಲರ ಎರಡನೇ ಮಗ ಸಿದ್ದೇಗೌಡನಿಗೆ ಸೇರಿದ್ದು....ರಾಮಯ್ಯ ಬಲಕ್ಕೆ ಒಮ್ಮೆ ಕಣ್ಣಾಯಿಸಿ ನೋಡಿದಾಗ ಅಲ್ಲೇ ಒಂದು ಬುಲ್ಲೆಟ್ ಕಂಡಿತು,ಅದು ಸಿದ್ದೆಗೌಡನದ್ದು...ಸುತ್ತ ಎಂಟಳ್ಳಿಯಲ್ಲಿ ಇವನ ಹತ್ತಿರ ಬಿಟ್ಟರೆ ಬೇರೆ ಯಾರ ಹತ್ತಿರವೂ ಈ ಬೈಕು ಇಲ್ಲ....

ಗುಡಿಸಲಿನ ಮುಂದೆ ಎರಡು ಜೊತೆ ಚಪ್ಪಲಿಗಳನ್ನು ಕಂಡಾಗ ರಾಮಯ್ಯನಿಗೆ ದಿಗಿಲು ಬಡಿದಂತಾಯಿತು ...
ಸಿದ್ದೇಗೌಡನಿಗೆ ಮೀನು ತಿನ್ನುವ ಚಪಲ,ತನ್ನ ಮನೆಯಲ್ಲಿ ಪಕ್ಕಾ ಸಸ್ಯಾಹಾರಿ,ಬಹುಷಃ ಇವನಿಗೆ ಮಾಂಸ ತಿನ್ನುವ ಚಟ ಇದೆ ಅಂತ ತಿಳಿದರೆ ಅವನನ್ನು ಮನೆಯಿಂದ ಹೊರ ಹಾಕುವುದಕ್ಕೂ ಯೋಚಿಸಲ್ಲ ಅವನ ತಾಯಿ...
ಆದ್ದರಿಂದ ಅವಾಗವಾಗ ತನ್ನ ತೋಟದ ಪಕ್ಕದಲ್ಲೇ ಇರುವ ರಾಮಯ್ಯನಿಗೆ ಹೇಳಿ ತರಿಸಿಕೊಳ್ಳುತ್ತಿದ್ದ..ಹೇಗೂ ಇವನು ಮೀನು ಹಿಡಿದು ಮಾರುತ್ತಾನೆ,ಬರೀ ತಂದು ಕೊಟ್ಟರೆ ಸಾಲದು,ಅವನಿಗೇನು ಅಡುಗೆ  ಮಾಡಕ್ಕೆ ಬರುತ್ತಾ ?,ಪುಟ್ಟವ್ವನೆ ಅದನ್ನು ಭೇಯಿಸಿ ತಂದು ಕೊಡುತ್ತಿದ್ದಳು...ರಾಮಯ್ಯ ಸಿದ್ದೇಗೌಡನ  ತೋಟಕ್ಕೂ  ಕೂಲಿ ಕೆಲ್ಸಕ್ಕೆ ಹೋಗುತ್ತಿದ್ದನಾದ್ದರಿಂದ ಅವನು ಇವನಿಗೆ ಹೇಳಿ ತರಿಸುತ್ತಿದ್ದ...

ಒಂದು ಕ್ಷಣ ಪಟೇಲರು ಮೀನು ತಿನ್ನುವುದಕ್ಕೆ ಬಂದಿರಬಹುದು ಎಂದು ತಿಳಿದರೂ ಕೂಡ , ಗುಡಿಸಲಿನ ಬಾಗಿಲು ಹಾಕಿದ್ದರಿಂದ ಅವನಿಗೆ ಅನುಮಾನ ಶುರು ಆಯಿತು...ಬಾಗಿಲು ಹಾಕಿದರೆ ಒಳಗಡೆ ಬೆಳಕು ಬರುವುದಿಲ್ಲ... ಅ ಕತ್ತಲಲ್ಲಿ ತಿನ್ನಲು ಸಾಧ್ಯವಿಲ್ಲ...
ಯಾಕೋ ಮನಸ್ಸಿಗೆ  ಒಂದು ರೀತಿ ಆಗಿ,ದುಡುಕಬಾರದು ಎಂದು ತಿಳಿದು ಸಂಜೆ ಮನೆಯಲ್ಲಿ ವಿಚಾರಿಸಿದರೆ ಆಗುತ್ತದೆ ಎಂದು ಸಂತೆ ಕಡೆ ಹೊರಟ....

ಹೆಂಡತಿಯ ಮೇಲೆ ವಿಪರೀತ ಕೋಪ ಇದ್ದ ರಾಮಯ್ಯ ಸಂತೆ ಇಂದ ಬರುವಾಗ ಕುಂಟ ರಾಜನ ಪೆಟ್ಟಿಗೆ ಅಂಗಡಿಯಲ್ಲಿ ಕಂಠ ಪೂರ್ತಿ ಕುಡಿದು ಬಂದ,ಮಕ್ಕಳಿಬ್ಬರೂ ಕೂಡ ಪ್ರತಿ ದಿನ ಇವನ ಅಣ್ಣನ ಮನೆಗೆ ಓದಿಕೊಳ್ಳಲು ಹೋಗುತ್ತಾರೆ....ಅಲ್ಲಿ ಅಣ್ಣನ ಮಗಳು ಇವರು ಪಾಠ ಹೇಳಿಕೊಡುವುದರಿಂದ ಅಲ್ಲಿಗೆ ಹೋಗುವ ಅಭ್ಯಾಸ...ಇವತ್ತು ರಾಮಯ್ಯ ಸಂತೆ ಇಂದ ಬರುವ ವೇಳೆಗೆ ಮಕ್ಕಳು ಆಗಲೇ ಅಲ್ಲಿಗೆ ಹೋಗಿದ್ದರು,ಬಂದವನೇ ಹೆಂಡತಿಯ ಹತ್ತಿರ ಹೇಗೆ ಮಾತು ಶುರು ಮಾಡುವುದು ಎಂದು ತಿಳಿಯದೆ ಚಿಂತಿಸ ತೊಡಗಿದ...ಸೀದಾ ಮನೆ ಹೊರಗಡೆ ಹೋದವನೇ ಒಂದು ದಡಿ ಕೋಲು ತಂದು ಅಡುಗೆ ಮನೆಯಲ್ಲಿ  ಒಲೆ ಅಚ್ಚುತ್ತಿದ ಪುಟ್ಟವ್ವನಿಗೆ ಒಡೆಯಲು ಶುರು ಮಾಡಿದ ...

ಅಯ್ಯಯ್ಯೋ,ದಮ್ಮಯ್ಯ ,ಯಾಕೆ ಹೊಡಿತಿದ್ದಿರ ಅಂತ ಕಿರುಚಿದರೂ ಇನ್ನು ತನ್ನ ಆಟವನ್ನು ನಿಲ್ಲಿಸಿಲ್ಲ...
'ನಾನು ಮಧ್ಯಾನ ಹೊಲಕ್ಕೆ ಬಂದಿದ್ದೆ,ಆ ಪಟೇಲ ಗುಡಿಸಿನಲ್ಲೇ  ಇದ್ದ ಅಲ್ವಾ?' ಅಂತ ಹೇಳಿದಾಗ, ಯಾರೋ ಬಂದು ಹಸುಗಳಿಗೆ ಮೇವು  ಹಾಕಿ ಹೋಗಿರುವುದು ನೆನಪಾಗಿ  ,ಇದು ತನ್ನ ಗಂಡನೇ ಎಂದು ತಿಳಿದು ಅವಳಿಗೆ ತನ್ನ ತಪ್ಪಿನ ಅರಿವಾಯಿತು...

ಅಷ್ಟೊತ್ತಿಗಾಗಲೇ ಪಕ್ಕದ ಮನೆಯಲ್ಲೇ ಇದ್ದ ತಮ್ಮ ಮಕ್ಕಳು ಮತ್ತು ಅಣ್ಣ ಅತ್ತಿಗೆ ಎಲ್ಲಾ ಅಲ್ಲಿಗೆ ಬಂದರು...ಆದರೆ ಯಾಕೆ ಜಗಳ ಮಾಡುತ್ತಿದ್ದೀವಿ ಎಂದು ರಾಮಯ್ಯ ಅಥವಾ ಪುಟ್ಟವ್ವ ಇಬ್ಬರೂ  ಹೇಳುವ ಸ್ಥಿತಿಯಲ್ಲಿ ಇರಲಿಲ್ಲ..
ಎಲ್ಲರೂ ಕುಡಿದು ಬಂದು ಜಗಳ ಮಾಡುತ್ತಿದ್ದಾನೆ ಎಂದು ಸುಮ್ಮನಾದರು...

ನಂತರ  ಮಕ್ಕಳಿಗೆ ಊಟ ಬಡಿಸಿ ಅವರು ಮಲಗಿದ ನಂತರ ಅಟ್ಟದ ಮೇಲಿದ್ದ ವಿಸ್ಕಿ ಬಾಟಲಿಗೆ ಕೋಸಿಗೆ ಸಿಂಪಡಿಸಲು ತಂದಿದ್ದ ಔಷಧಿ ಬೆರೆಸಿ  ಕುಡಿದು ಬಿಟ್ಟಳು...ಊಟ ಮಾಡದೆ ಮನೆಯ ಜಗುಲಿಯ ಮೇಲೆ ಮಲಗಿದ್ದ ರಾಮಯ್ಯನಿಗೆ ಇದರ ಅರಿವೇ ಇಲ್ಲ....
ಮಧ್ಯ ರಾತ್ರಿ ಇದ್ದಕಿದ್ದ ಹಾಗೆ ನೋವು  ತಡೆಯಲಾರದೆ ಅವಳು ಕಿರುಚಲು ಶುರು ಮಾಡಿದಾಗ ಒಳಗೆ ಬಂದು ನೋಡಿದರೆ ನೆಲದ ಮೇಲೆ ಹೊರಳಾಡುತ್ತಿದ್ದಾಳೆ,ಮತ್ತು ಅವಳ ಬಾಯಲ್ಲಿ ಒಂದು ರೀತಿಯ ರಸ ಸೋರುವುದನ್ನು ಗಮನಿಸಿ ಏನೋ ಅನಾವುತ ಮಾಡಿಕೊಂಡಿದ್ದಾಳೆ ಎಂದು ತಿಳಿದು ನಡು ರಾತ್ರಿಯಲ್ಲಿ ಎತ್ತಿನ ಗಾಡಿಯಲ್ಲಿ ಅವಳನ್ನು ಪೇಟೆಗೆ ಆಸ್ಪತ್ರೆಗೆ ಕರೆದುಕೊಂಡು ಹೋದ...

ಬೆಳಗ್ಗೆ ಹೊತ್ತಿಗೆ ತನ್ನ ಅಣ್ಣ ಅತ್ತಿಗೆ ಮಕ್ಕಳು ಎಲ್ಲಾರಿಗೂ ವಿಷಯ ತಿಳಿದು ಎಲ್ಲಾ ಆಸ್ಪತ್ರೆಗೆ ಬಂದರು...ಪುಟ್ಟವ್ವನ ಸ್ಥಿತಿ ಆಗಲೇ ಗಂಭೀರ ಆಗಿತ್ತು...ಚಿಕಿತ್ಸೆ ಕೊಡುವ ಮೊದಲು ವೈದ್ಯರು ಒಂದು ಫಾರಂಗೆ ಇವನ ಬಳಿ ಸಹಿ ಪಡೆದಿದ್ದರು...ಇತ್ತ ರಾಮಯ್ಯನಿಗೂ ತನ್ನ ತಪ್ಪಿನ ಅರಿವಾಯಿತು...ಅವಳು ಬದುಕುವುದಿಲ್ಲ ಎಂದು ಖಾತರಿ ಆದ ಮೇಲೆ ಅಲ್ಲಿಂದ ಕಾಲು ಕಿತ್ತ...ಸ್ವಲ್ಪ ಸಮಯದಲ್ಲೇ
ಪುಟ್ಟವ್ವ ತೀರಿಕೊಂಡಳು....
ಸರಿ  ಅಷ್ಟೊತ್ತಿಗಾಗಲೇ ಅವನು ಪರಾರಿ ಆಗಿರುವ  ವಿಷಯ ಎಲ್ಲರಿಗೂ ತಿಳಿಯಿತು,ಅವನು ಬರುವುದಿಲ್ಲ ಎಂದು ತಿಳಿದು ಅವನ ಅಣ್ಣನೆ ಆಕೆಯ ಅಂತ್ಯ ಕ್ರಿಯೆ ಹೊಣೆ ಹೊತ್ತನು...ಅವಳ ಹೆಣವನ್ನು ಸುಡುವುದನ್ನು ರಾಮಯ್ಯ ಅದೇ ಕೋಡುಗಲ್ಲಿನ ದೊಡ್ಡ ಬಂಡೆಯ ಬಳಿ ನಿಂತು ಅಲ್ಲಿಂದ ನೋಡಿದ...೩-೪ ದಿನ ಅಲ್ಲಿ ಇಲ್ಲಿ ಸುತ್ತಾಡಿದ ಇವನು ,ತನ್ನ ಮಕ್ಕಳನ್ನು ನೆನೆದು ಮನೆಗೆ
ಹಿಂದಿರುಗಿದ,ಆದರೆ ಆಗಲೇ ಪೊಲೀಸರು ಇವನ ಹಿಂದೆ ಬಿದ್ದಿರುವುದು ಅವನಿಗೆ ತಿಳಿದೇ ಇರಲಿಲ್ಲ...

ಬಂದವನೇ ತನ್ನ ಸ್ನೇಹಿತ ರಂಗಯ್ಯನ ಹತ್ತಿರ ನಡೆದ ವಿಷ್ಯ ಎಲ್ಲಾ ಹೇಳಿದ್ದ,ರಂಗಯ್ಯನ ಮಗಳು ಮತ್ತು ಇವನ ಮಗಳು ಒಂದೇ ಕ್ಲಾಸ್ಸಿನಲ್ಲಿ ಓದುತ್ತಿದ್ದಾರೆ....ಪೊಲೀಸರಿಗೆ ಇವನು ಬಂದಿರುವ ಸುಳಿವು  ಸಿಕ್ಕೊಡನೆ ಇವನನ್ನು ಅರೆಸ್ಟ್ ಮಾಡಿದರು ಮತ್ತು ಕೋರ್ಟಿನಲ್ಲಿ ಇರಿಂಗ್  ನಡೆಯುತ್ತಿತ್ತು ,ಇವನು ಪೋಲಿಸ್ ವಶದಲಿದ್ದ...
ಇತ್ತ ಮಕ್ಕಳು ಅಣ್ಣನ ಮನೆಯಲ್ಲಿ ಇದ್ದಾರೆ ,ಅತ್ತಿಗೆಯೇ ಇವನ ಮಕ್ಕಳಿಂದ  ಪೊಲೀಸರಿಗೆ ದೂರು ಕೊಡೆಸಿದ್ದಳು.... ಏನು ಮಾಡುತ್ತಿದ್ದೇವೆ,ಇದರಿಂದ ತನ್ನ ತಂದೆ ಜೈಲಿಗೆ ಹೋಗುತ್ತಾರೆ ಎಂಬ ಸುಳಿವು ಸಿಗದ ಹಾಗೆ ಅವರಿಂದ ದೂರು ಕೊಡಿಸುತ್ತಾಳೆ....

ಈ ಮಕ್ಕಳಿಗೆ ಶಾಲೆಯಲ್ಲಿ ಒಂದು ರೀತಿಯ ಕಿರಿ ಕಿರು ಶುರು ಆಯಿತು....ಎಲ್ಲರೂ ನಿಮ್ಮಪ್ಪ ಜೈಲಲ್ಲಿ ಇದಾರಂತೆ,ನಿಮ್ಮ ಅಪ್ಪ,ನಿಮ್ಮ ಅಮ್ಮನ ಸಾಯ್ಸಿದರಂತೆ?ಹೀಗೆ ಕೇಳಲು ಶುರು ಮಾಡಿದರು... ಮಕ್ಕಳು ಅಳಲು  ಶುರು ಮಾಡಿದರು.... ಆಗ ರಂಗಯ್ಯನ ಮಗಳು ಮನೆಯಲ್ಲಿ  ಈ ವಿಷಯ ಹೇಳಿದಾಗ, ಎಲ್ಲಾ ವಿಷಯ ತಿಳಿದಿದ್ದ ರಂಗಯ್ಯ ಊರಿನ ಕೆಲವು ಮುಖಂಡರೊಡನೆ ಚರ್ಚಿಸಿ ,ಮಕ್ಕಳು ಓದುತ್ತಿದ್ದ ಶಾಲೆಯ ಮಾಸ್ತರು ಬಳಿ ವಿಷಯ ತಿಳಿಸಿ ರಾಮಯ್ಯನ ಮಕ್ಕಳಿಗೆ ತನ್ನ ತಂದೆಯ ತಪ್ಪಿಲ್ಲ ಮತ್ತು ಅವರು ಕೊಟ್ಟಿರುವ ದೂರನ್ನು ಹಿಂಪಡೆಯಲು  ಹೇಳಿ ಎಂದು ಹೇಳಿದ...ಅವನ ಅತ್ತಿಗೆಗೆ ಊರಿನವರೆಲ್ಲ ಇವನನ್ನು ಜೈಲಿನಿಂದ ಬಿಡಿಸಲು ಹೊಂಚು ಹಾಕುತ್ತಿದ್ದಾರೆ ಮತ್ತು ಮಕ್ಕಳ ಕಿವಿಗೆ  ಏನೇನೋ ತುಂಬುತ್ತಿದ್ದಾರೆ   ಎಂದು ತಿಳಿದು ಅವರನ್ನು ಶಾಲೆಗೇ ಕಳುಹಿಸುವುದನ್ನು ನಿಲ್ಲಿಸುತ್ತಾಳೆ..........

ಇತ್ತ ಮಕ್ಕಳಿಗೆ ತಾಯಿಯು ಸತ್ತಿದ್ದಾಳೆ,ಬದುಕಿರುವ ತಂದೆ ಜೈಲಿನಲ್ಲಿ  ಇದ್ದಾರೆ,ಒಂದು ರೀತಿಯಲ್ಲಿ ಮಾನಸಿಕೆ ಹಿಂಸೆ ಅಲ್ಲದೆ ತಮ್ಮ ದೊಡ್ಡಮ್ಮ ಕೂಡ ಹಿಂಸೆ ಕೊಡುತ್ತಿದ್ದಾರೆ ....,ಹೇಗೋ ಹಠ ಹಿಡಿದು ಕಡೆ ಪಕ್ಷ ಶಾಲೆಗಾದರು ಹೋಗಬೇಕು ಎಂದು ಶಾಲೆಗೇ ಹೋಗಲು ಶುರು ಮಾಡಿದರು... ಹಿಂದೆ ಒಂದು ದಿನ ತಮ್ಮ ಮೇಷ್ಟ್ರು ತಮ್ಮ ತಾಯಿ ಸತ್ತ ನಂತರ ತಮ್ಮ
ತಂದೆಯನ್ನು ಜೈಲಿನಿಂದ ಬಿಡಿಸುತ್ತೇವೆ ಎಂದು ಹೇಳಿದ್ದು  ನೆನಪಾಗಿ ಅವರ ಹತ್ತಿರ ಹೋದರು... ಮಾಸ್ತರಿಗೆ ಇವರು ಇಷ್ಟು ದಿನ ಯಾಕೆ ಶಾಲೆಗೇ ಬಂದಿರಲಿಲ್ಲ ಎಂಬ ವಿಷಯ ಗೊತ್ತಿತ್ತು ಮತ್ತು ಮಕ್ಕಳನ್ನು ನೋಯಿಸಬಾರದು ಎಂದು ಅದರ ಬಗ್ಗೆ ಕೇಳಲೇ ಇಲ್ಲ...

ರಂಗಯ್ಯನನ್ನು ಶಾಲೆಗೇ ಕರೆಸಿ ಮೇಷ್ಟ್ರು ಮತ್ತು ರಂಗಯ್ಯ ಇಬ್ಬರೂ ಮಕ್ಕಳಿಗೆ ತಮ್ಮ ತಂದೆ ಹೊಡೆದಿದ್ದರಿಂದ ತಮ್ಮ ತಾಯಿ ಸತ್ತಿಲ್ಲ,ಅವಳು ವಿಷ ಕುಡಿದು ಸತ್ತಿದ್ದು, ಅವನೇ ಹೊಡೆದಿದ್ದರೆ ಅವನಾಗೇ ಯಾಕೆ ಆಸ್ಪತ್ರೆಗೆ ಸೇರಿಸುತ್ತಿದ್ದ ಎಂದೆಲ್ಲ ಹೇಳಿದ ಮೇಲೆ, ಅವರಿಬ್ಬರಿಗೂ ನಡೆದ ವಿಷ್ಯ ಅರ್ಥ ಆಗ ತೊಡಗಿತು...ಆದರೆ ಮೇಷ್ಟ್ರು ಆಗಲಿ,ರಂಗಯ್ಯ ಆಗಲಿ ರಾಮಯ್ಯ ತನ್ನ ಹೆಂಡತಿಗೆ ಯಾಕೆ ಹೊಡೆದ,ಯಾಕೆ ಜಗಳ ಮಾಡಿದ ಎಂಬ ವಿಷಯವನ್ನು ಮಾತ್ರ ಮಕ್ಕಳಿಗೆ ಹೇಳಲಿಲ್ಲ,ಹೇಳಿದ್ದರೆ ಅವರಿಗೆ ತಮ್ಮ ತಾಯಿಯ ಮೇಲೆ ಅಸಡ್ಡೆ ಬರುತಿತ್ತೋ ಅಥವಾ ಅವರ ಮನಸ್ಸಿಗೆ ಎಂದೂ ಮಾಸದ ಗಾಯ ಆಗಿ ಬಿಡುತ್ತಿತ್ತು,...

ಹೇಗೋ ರಾಮಯ್ಯನ ಅತ್ತಿಗೆಗೆ ಗೊತ್ತಾಗದ ಹಾಗೆ ಮಕ್ಕಳನ್ನು ಓಲೈಸುವಲ್ಲಿ ಇವರಿಬ್ಬರೂ ಯಶಸ್ವಿ  ಆಗಿದ್ದರು...ಮುಂದಿನ ಇರಿಂಗ್ ಗೆ ಮಕ್ಕಳೊಡನೆ ಅವನ ಅಣ್ಣ ಮತ್ತು ಅತ್ತಿಗೆ ಇಬ್ಬರು ಬಂದರು,ರಂಗಯ್ಯ ಕೂಡ ಬಂದಿದ್ದ,ಆದರೆ ಮೇಷ್ಟ್ರು ಮಾತ್ರ ಬಂದಿರಲಿಲ್ಲ.... ಕೋರ್ಟಿನಲ್ಲಿ ಲಾಯರ್ ಕೇಳುವ ಪ್ರಶ್ನೆಗಳಿಗೆ ಏನೇನು ಉತ್ತರ ಹೇಳಬೇಕು ಎಂದು ಮೇಷ್ಟ್ರು ಹೇಳಿ ಕೊಟ್ಟಿದ್ದರು...

ಅದರಂತೆ ಮಕ್ಕಳು ತಮ್ಮ ತಂದೆಯನ್ನು ಜೈಲಿನಿಂದ ಕಳುಹಿಸಿ ಎಂದು  ತಮ್ಮ ಮುಗ್ಧ ಭಾವದಿಂದ ಕೇಳಿಕೊಂಡರು,ಕೆಲವು ಪ್ರಶ್ನೋತ್ತರಗಳು ಮುಗಿದ ಮೇಲೆ ದೂರು ಕೊಟ್ಟಿದ್ದ ಮಕ್ಕಳು,ಇದು ನಮಗೆ ತಿಳಿಯದಂತೆ ತಮ್ಮ ದೊಡ್ಡಮ್ಮ ಹೇಳಿಕೊಟ್ಟ ಹಾಗೆ ನಾವು ಪೋಲೀಸರ ಹತ್ತಿರ ಹೇಳಿದ್ದೆವು ಎಂದು ತಿಳಿಸದರು...ಇವರು  ಹೇಳಿದಂತೆ ಪೊಲೀಸರು ಬರೆದು ಕೊಂಡಿದ್ದರು ಅಷ್ಟೇ.... ಅಲ್ಲದೆ  ಇವನ ಅಣ್ಣ ಅತ್ತಿಗೆಗೆ ಒಂದು ರೀತಿಯ ಹಿನ್ನಡೆ ಆಯಿತು...ರಾಮಯ್ಯನ ಅತ್ತಿಗೆ ಈ ರೀತಿ ದೂರು ಕೊಡಲು ಒಂದು ಮುಖ್ಯ ಕಾರಣ ಎಂದರೆ,ಪುಟ್ಟವ್ವ ಅವಳ ಸ್ವಂತ ತಂಗಿ....

ಹೇಗೋ ಒಟ್ಟಿನಲ್ಲಿ ರಾಮಯ್ಯ ಜೈಲಿನಿಂದ ಬಿಡುಗಡೆ ಆದ,ಈಗ ಮಕ್ಕಳನ್ನು ಸಾಕುವ ಹೊಣೆ ಇದೆ,ಜೊತೆಗೆ ಅವರಿಗೆ ಇದರ ಹಿಂದಿನ ವಿಷಯ ತಿಳಿಯಬಾರದು ಮತ್ತು ಅವರಿಗೆ ತಾಯಿಯ ಕೊರಗು
ಬಾರದಂತೆ ನೋಡಿ ಕೊಳ್ಳಬೇಕು....

ಎಷ್ಟೋ ಜನ ಇನ್ನೊಂದು ಮದುವೆ ಮಾಡಿಕೊ ಎಂದರೂ ಕೂಡ,ಇವನು ಮರು ಮದುವೆ ಆಗದೆ ಹಾಗೆ ಇದ್ದಾನೆ....
ಮಕ್ಕಳಿಗೆ ಮಲತಾಯಿ ಬೇಡ ಎಂಬುದು ಇವನ ಆಶಯ...
------
^^^^^^

Sunday, August 7, 2011

Happy Friendship Day !!!!


ಇದೊಂದು ಅಮೂಲ್ಯ ಬೆಸುಗೆ....
ಇಲ್ಲಿ ವಯಸ್ಸಿನ ಅರಿವಿಲ್ಲ..,
ಗಂಡು ಹೆಣ್ಣೆಂಬ ಅಂತರವಿಲ್ಲ,
ಜಾತಿ,ಧರ್ಮಗಳ ಭೇದವಿಲ್ಲ...
ಕುಲ ಗೊತ್ರಗಳು ಲೆಕ್ಕಕಿಲ್ಲ...
ಪ್ರೀತಿ,ಔದಾರ್ಯಕ್ಕೆ ಕೊರತೆಯಿಲ್ಲ...
ಇದು ಬಿಡಿಸಲಾಗದ ಸ್ನೇಹ ಸಂಬಂಧ...
ಮಧುರ ಅನುಬಂಧ...
ಜೀವನಾನಂದ...

ಕಷ್ಟದಲ್ಲಿ ಸಹಾಯ ಹಸ್ತ ನೀಡುವರು...
ದುಃಖದಲ್ಲಿ ಭಾಗಿಯಾಗುವರು....
ಸಂತಸ ಹಂಚಿಕೊಳ್ಳುವರು...
ಸೋತಾಗ ಹುರಿದುಂಬಿಸುವರು...
ಗೆದ್ದಾಗ ನಮ್ಮಷ್ಟೇ ಹಿಗ್ಗುವರು...
ಕೋಟಿ ಕೊಟ್ಟರು ಸಿಗದವರು...
ಮುಸ್ಸಂಜೆ ತಂಗಾಳಿಯಂತೆ ಮುದ ನೀಡುವರು...
ಇವರು ಹೃದಯಸ್ಪರ್ಶಿ ಸ್ನೇಹಿತರು...

ನೀಡುವರು ನಿಷ್ಕಲ್ಮಶ ಪ್ರೀತಿ...
ಇದರಿಂದ ಬಾಳಲ್ಲಿ ಸಂಪ್ರೀತಿ...