Tuesday, April 7, 2015

ಬಿದಿರುತಳ - ಕೊಡೆಕಲ್ಲು ಚಾರಣ

ಏಪ್ರಿಲ್ ೫ , ಪೂರ್ಣಚಂದ್ರ ತೇಜಸ್ವಿ ಅವರು ನಮ್ಮನ್ನಗಲಿ ಇಂದಿಗೆ ೯ ವರ್ಷ ಆಗಿದೆ .. ಅವರ ಸಂಸ್ಮರಣಾ  ಅಂಗವಾಗಿ ಕೊಟ್ಟಿಗೆಹಾರದ "ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಜೀವ ವೈವಿಧ್ಯ ಸಂಶೋಧನಾ ಕೇಂದ್ರ ಮತ್ತು ವಿಸ್ಮಯ ಪ್ರತಿಷ್ಠಾನ," ಸಂಸ್ಥೆಯು ಒಂದು  ಚಾರಣವನ್ನು ಚಾರ್ಮಾಡಿ ಘಾಟಿನ ಬಳಿಯ ಬಿದುರುತಳದಿಂದ ಕೊಡೈಕಲ್ಲಿನವರೆಗೆ ಆಯೋಜಿಸಿತ್ತು. . ಕಾಡು ಸುತ್ತುವುದು , ಜೀವ ವೈವಿಧ್ಯಗಳ ಬಗ್ಗೆ ಅಧ್ಯಯನ  , ಛಾಯಾಗ್ರಹಣದ ಮೂಲಕ ಮಲೆನಾಡಿನ ಕಾಡುಗಳನ್ನು ಅಲ್ಲಿನ ಜೀವನ  ಶೈಲಿಯನ್ನು    ಕೃತಿಗಳ ಮೂಲಕ ಪರಿಚಯಿಸಿದ ತೇಜಸ್ವಿ ಅವರ ಬದುಕು ಕೂಡ ಒನ್ ರೀತಿಯ ವಿಸ್ಮಯವೇ ಸರಿ . ಈ ನಿಟ್ಟಿನಲ್ಲಿ ವಿಸ್ಮಯ ಪ್ರತಿಷ್ಠಾನದ ವಾರ್ಷಿಕ ಕಾರ್ಯಕ್ರಮಗಲ್ಲಿ ಚಾರಣ ಕಾರ್ಯಕ್ರಮವು ಕೂಡ ಒಂದು . ಇದೆ ಅಲ್ಲದೆ ಶಾಲಾ ಕಾಲೇಜುಗಳಲ್ಲಿ ತೇಜಸ್ವಿ ಪುಸ್ತಕ ಮತ್ತು ಬದುಕಿನ ಕುರಿತು ವಿಚಾರ ಸಂಕೀರ್ಣಗಳನ್ನು ಕೂಡ ಆಯೋಜಿಸಲಾಗುತ್ತದೆ . ಈ ಎಲ್ಲಾ ಕಾರ್ಯಕ್ರಮಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಭಾಗಿತ್ವದಲ್ಲಿ ನಡೆಯುತ್ತದೆ. 



ಚಾರಣಕ್ಕು ಮೊದಲು ಒಂದು ಗ್ರೂಪ್ ಫೋಟೋ 


ಈ ಚಾರಣಕ್ಕೆ ತೇಜಸ್ವಿ ಅವರ ಒಡನಾಡಿಗಳು , ವಿಸ್ಮಯ ಪ್ರತಿಷ್ಠಾನದ ಕೆಲವು ಸದಸ್ಯರು , ನಾಡಿನ  ನಾನಾ ಭಾಗಗಳಿಂದ ಚಾರಣಪ್ರಿಯರು ,ಪರಿಸರ ಪ್ರೇಮಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.  ಈ ಬಾರಿಯ ಚಾರಣ ಗುಂಪಿನಲ್ಲಿ ಅತಿ ಚಿಕ್ಕ  ಚಾರಣಿಗ ೯ ವರ್ಷ ವಯಸ್ಸಿನವನಾದರೆ , ೭೯ ವರ್ಷದ ಹಿರಿಯ ಚಾರಣಿಗರೂ ಇದ್ದರು . ವಯಸ್ಸಿನ ಮಿತಿ ಇಲ್ಲದೆಂಬಂತೆ ಎಲ್ಲ ವಯೋಮಿತಿಯ ಮತ್ತು ವಿವಿಧ ಉದ್ಯೋಗದಲ್ಲಿರುವವ ಚಾರಣಿಗರೂ ಬಂದಿದ್ದರು . 
With Vasu Sir,eldest trekker(79 yrs) of our troop 


With Navaneeth, youngest trekker(9 yrs) of our troop
With Blog friends(Prashathi, Vidruma, Bhagya)


ಪ್ರತಿ ಬಾರಿಯಂತೆ ಈ ಸಲವೂ ವಿಸ್ಮಯ ಪ್ರತಿಷ್ಠಾನದ ಕಛೇರಿಯಲ್ಲಿ ಬೆಳಗಿನ ಉಪಹಾರ ಸೇವಿಸಿ , ಎಲ್ಲರ ಪರಿಚಯ ಕಾರ್ಯಕ್ರಮದ ನಂತರ ನಮಗಾಗಿ ಕಾದಿದ್ದ ಜೀಪಿನಲ್ಲಿ 'ಖಾನ್ ಹೊರಟ್ಟಿ'ಯ ತನಕ ಸಾಗಿದೆವು . ಈ ಖಾನ್ ಹೊರಟ್ಟಿ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಅತೀ ಕಡಿಮೆ ಮತದಾರರು(ಸುಮಾರು ೪೦-೫೦)   ಮತಗಟ್ಟೆ ಕೇಂದ್ರ . ಕೊಟ್ಟಿಗೆಹಾರ ದಿಂದ ಚಾರ್ಮಾಡಿ ಘಾಟ್ ಕಡೆಗೆ ಸುಮಾರು ೫-೬ ಕಿ. ಮೀ ಹೋದ ನಂತರ ಬಲಕ್ಕೆ ತಿರುಗಿ ಈ ಜಾಗವನ್ನು ತಲುಪಬೇಕು . ಈ ಹಟ್ಟಿಯು  ನಮ್ಮ ಚಾರಣದ ಬೇಸ್ ಕ್ಯಾಂಪ್ . ಅಲ್ಲಿಂದ ಸುಮಾರು ೪೫ ಸದಸ್ಯರಿದ್ದ ನಮ್ಮ ಚಾರಣದ ಗುಂಪು ಬಿದಿರುತಳದ ಕಡೆಗೆ ನಮ್ಮ ಮಾರ್ಗದರ್ಶಕರಾಗಿದ್ದ ಅರ್ಜುನರ ಅಣತಿಯಂತೆ  ಸಾಗಿತು. ಬೆಳಗ್ಗೆ ಸುಮಾರು ೯:೩೦ ಕ್ಕೆ ಶುರುವಾದ ಚಾರಣ ಮಧ್ಯಾಹ್ನ ೧೨:೩೦ರ ವೇಳೆಗೆ ಬಿದಿರುತಳ ತಲುಪಿದೆವು . 
ಬಿದಿರುತಳದ ಬಳಿಯ ಝರಿ 


ಈ ಬಿರು ಬೇಸಿಗೆಯಲ್ಲೂ ಕೂಡ ಹಲವಾರು ಬಗೆಯ ಹೂವುಗಳ ಸೊಬಗು ಕಂಡಿದ್ದು ಆಶ್ಚರ್ಯವೇ ಅಲ್ಲದೆ ಪರಿಸರದ ಆಟವೂ ಎನ್ನಬಹುದು . ಸುಮಾರು ೩ ರೀತಿಯ ಕಾಡು ಮಲ್ಲಿಗೆ ಹೂವುಗಳು ನಮಗೆ ದರ್ಶನ ನೀಡಿದವು. ಅಷ್ಟೇ ಅಲ್ಲದೆ ಕೆಲವು ಹಣ್ಣುಗಳು ರುಚಿ ನೋಡಲು ಸಿಕ್ಕಿದವು . ಮುಖ್ಯವಾಗಿ ಚಟ್ಟೆ ಹಣ್ಣು , ಕೆಲವು ಕಡೆ ಇದನ್ನು ಮುಳ್ಳು ಹಣ್ಣು ಎಂದೂ ಕರೆಯುತ್ತಾರೆ .. 

ಚಾರಣದ ಹಾದಿಯಲ್ಲಿ 

ಚಾರಣದ ಹಾದಿಯಲ್ಲಿ 

ಚಟ್ಟೆ ಹಣ್ಣು 



Yellow Beauty
ಚಟ್ಟೆ ಹಣ್ಣು 

ಈ ಬಿದಿರುತಳ ಗ್ರಾಮದಲ್ಲಿ ಸುಮಾರು ೭-೮ ಕುಟುಂಬ ವಾಸವಾಗಿವೆ .  ಈ ಗ್ರಾಮವು ಕಾಡಿನ ಮಧ್ಯೆ ಇರುವುದರಿಂದ ಕಾಡು ಪ್ರಾಣಿಗಳ ಉಪಟಳ ಸ್ವಲ್ಪ ಜಾಸ್ತಿಯೇ ಇದೆ ..  ಒಂದು ರೀತಿಯ ಕಾಡು ಬೆಕ್ಕು ಈ ಮನೆಗಳಲ್ಲಿ ಸಾಕಿರುವ ಕೋಳಿ ಹುಂಜಗಳನ್ನು ಆಗಾಗೆ ಹೊತ್ತೊಯ್ಯುತ್ತದೆ .. ಆದರಿಂದ ಕೋಳಿಗಳನ್ನುಅವು ಹೊತ್ತೊಯ್ಯದಂತೆ  ಕೂಡಿ ಹಾಕಲು ಕೆಳಗಿನ ರೀತಿಯ ಕೊಲಿಮನೆಗಳನ್ನು ಎಲ್ಲಾ ಮನೆಯ ಮುಂದೆ ಕಾಣಬಹುದು .. ಅಲ್ಲಿ ಎರಡು ಸಣ್ಣ ಗುಡ್ಡಗಳ ನಡುವೆ ಒಂದು ಸಣ್ಣ ಝರಿಯಲ್ಲಿ ಶುಭ್ರ ನೀರು  ಹರಿಯುತ್ತಿತ್ತು ..  ಅಲ್ಲೇ ಕೂತು ,ನಮ್ಮ ಊಟವನ್ನು ಮುಗಿಸಿದೆವು . ಬೆಳಗ್ಗೆ ಚಾರಣ ಹೊರಡುವ ಮೊದಲೇ ನಮಗಾಗಿ ಊಟದ ಪೊಟ್ಟಣವನ್ನು ಕೊಟ್ಟಿದ್ದರು . ಸ್ವಲ್ಪ ಹೊತ್ತು ವಿರಾಮದ ನಂತರ ನಮ್ಮ ಉದ್ದಿಷ್ಟ ಸ್ಥಳವಾದ ಕೊಡೈ ಕಲ್ಲಿನೆಡೆಗೆ ಸಾಗಿತು . ಇದನ್ನು ಕೆಲವರು,ದೂರಕ್ಕೆ ಕೊಡೆಯ ರೀತಿ ಕಾಣುವುದರಿಂದ  ಕೊಡೆಕಲ್ಲು ಎಂದು ಕರೆಯುತ್ತಾರೆ ಎಂದೂ , ಇನ್ನು ಕೆಲವರು  ಇದು ಚಿಕ್ಕಮಗಳೂರು ಜಿಲ್ಲೆಯ ಅಂಚು ಆಗಿದ್ದು ,ಈ ಗುಡ್ಡದ ಕೆಳಗೆ ಇಳಿದರೆ ದಕ್ಷಿಣ ಕನ್ನಡ ಜಿಲ್ಲೆಯ ಸರಹದ್ದು ಶುರುವಾಗುವುದರಿಂದ ಇದನ್ನು ಕಡೆಕಲ್ಲು ಎಂದೂ ಕರೆಯುತ್ತಾರೆ ಎಂದು ಹೇಳಿದರು . 


ಕೊಡೆಕಲ್ಲು ಅಥವ ಛತ್ರಿ ಕಲ್ಲು 

ಈ ಕಲ್ಲಿನ ಬಳಿ ಸ್ವಲ್ಪ ವಿಶ್ರಾಮ ಮಾಡಿದ ನಂತರ ಮುಂದೆ ಸಾಗಿ ಚಾರ್ಮಾಡಿ ಘಾಟಿನ ಮುಖ್ಯ ರಸ್ತೆಯನ್ನು ಸಂಜೆ ೫:೩೦ ರ ವೇಳೆಗೆ ತಲುಪಿದೆವು .ಅಲ್ಲಿಗೆ ಸುಮಾರು ೧೪ ಕಿ. ಮೀ ನ ನಮ್ಮ ಚಾರಣ ಕೊನೆಗೊಂಡಿತ್ತು . ಮತ್ತೆ ಅಲ್ಲಿಂದ ನಮಗಾಗಿ ಕಾದಿದ್ದ ವಾಹನದಲ್ಲಿ ವಿಸ್ಮಯ ಪ್ರತಿಷ್ಠಾನದ ಕಛೇರಿಯನ್ನು ತಲುಪಿ , ಕಾಫಿ ಸೇವಿಸಿ ನಮ್ಮ ನಮ್ಮ ಊರಿನ ಕಡೆಗೆ ಹೊರಟೆವು .  

ಚಾರಣದ ಇನ್ನೊಂದು ವಿಶೇಷ ಅಂದರೆ ನಮ್ಮ ಧ್ಯೇಯ ಪರಿಸರವನ್ನುಹಾಳು ಮಾಡದೆ ಸ್ವಚ್ಚವಾಗಿಟ್ಟು ಪರಿಸರದ ಸೊಬಗನ್ನು ಸವಿಯುವುದು .. ಆಗಾಗಿ ಯಾರೂ ಕೂಡ ಯಾವುದೇ ರೀತಿಯ ಪ್ಲಾಸ್ಟಿಕ್ ಬಾಟಲ್ ಆಗಲಿ ಪ್ಲಾಸ್ಟಿಕ್ ವಸ್ತುಗಳನ್ನು ಕಾಡಿನ ಮಧ್ಯೆ ಬಿಸಾಡದೆ ಅದನ್ನು ಹಾಗೆ ಪುನಃ ತಂದಿದ್ದು . ಇದಕ್ಕೆ ಪ್ರತಿಯೊಬ್ಬ ಚಾರಣಿಗರೂ ಕೂಡ ಸಹಕರಿಸಿದರು 
ನಿರ್ಮಾಣ ಅಂತದಲ್ಲಿರುವ ವಿಸ್ಮಯ ಪ್ರತಿಷ್ಠಾನದ ನೂತನ ಕಟ್ಟಡ 


ಬರುವಾಗ ನಿರ್ಮಾಣ ಅಂತದಲ್ಲಿರುವ ವಿಸ್ಮಯ ಪ್ರತಿಷ್ಟಾನದ ನೂತನ ಕಚೇರಿಯ ಬಳಿ ಹೋಗಿ ಬಂದೆವು . ಇದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಭಾಗಿತ್ವದಲ್ಲಿ ನಿರ್ಮಾಣ ಆಗುತ್ತಿದ್ದು , ತೇಜಸ್ವಿ ಅವರ ಕುರಿತು ಸಂಶೋಧನೆಗೆ ಮೀಸಲಿಡಲಾಗುತ್ತದೆ. ಈಗ ಕೊಟ್ಟಿಗೆಹಾರದಲ್ಲಿರುವ ಇರುವ ಕಚೇರಿಯು ಅಲ್ಲಿನ Inspection Bungalow ಆಗಿದ್ದು ತಾತ್ಕಾಲಿಕವಾಗಿ ಅಲ್ಲಿ ಕಾರ್ಯ ನಿರ್ವಹಿಸುತ್ತಿದೆ . ಹಾಗಾಗಿ ಈ ಸಂಶೋಧನಾ ಕೇಂದ್ರಕ್ಕೆ ಸ್ವಂತ ಕಟ್ಟಡದ ಅವಶ್ಯಕತೆಯಿದ್ದು ಅದನ್ನು ಮಂಜೂರು ಮಾಡಿದ್ದು ನಿರ್ಮಾಣ ಅಂತದಲ್ಲಿದೆ . ಇಲ್ಲಿ ತೇಜಸ್ವಿ ಅವರು ಬಿಡಿಸಿರುವ ವರ್ಣ  ಚಿತ್ರಗಳು  ಮತ್ತು ಛಾಯಾಚಿತ್ರಗಳ ಪ್ರದರ್ಶನ ಇರುತ್ತದೆ ಮತ್ತು ಅವರ ಮತ್ತು ಪಶ್ಚಿಮ ಘಟ್ಟದ ಕುರಿತು ಅಧ್ಯಯನ ಮತ್ತು ಸಂಶೋಧನೆ ಮಾಡುವ ವಿಧ್ಯಾರ್ಥಿಗಳಿಗೆ ಎಲ್ಲಾ ರೀತಿಯ ಸೌಕರ್ಯಗಳನ್ನು ಕಲ್ಪಿಸಲಾಗುತ್ತದೆ ಎಂಬ ಮಾಹಿತಿ ದೊರಕಿತು 


ಸೂರ್ಯಾಸ್ತ 

     

8 comments:

  1. ನಾ ಬರೀಬೇಕು ಬರೀಬೇಕು ಅಂತ ಅಂದ್ಕೊಳ್ಳೋ ಅಷ್ಟರಲ್ಲೇ ಬರೆದು ಬಿಟ್ಟಿದೀರಲ್ಲ ಗಿರಿ.. ಚೆನ್ನಾಗಿದೆ ;-) ಇದಕ್ಕಿಂತ ಭಿನ್ನವಾಗಿ ಏನಾದ್ರೂ ಬರೀಬೇಕು ಅಂದ್ರೆ ಕಷ್ಟಾನೆ.. ನೋಡೋಣ ;-)

    ReplyDelete
  2. ನಿಮ್ಮ ಚಾರಣದ ವಿವರಗಳನ್ನು ಓದಿ ಖುಶಿಯಾಯಿತು. ‘ಸೂರ್ಯಾಸ್ತ’ ತುಂಬ ಚೆನ್ನಾಗಿದೆ.

    ReplyDelete
  3. ಗಿರೀಶ್ ನಿಮ್ಮ ಚಾರಣದ ವಿವರ ಬಹಳ ಸುಂದರವಾಗಿ ಮೂಡಿಬಂದಿದೆ , ಸುಂದರ ಚಿತ್ರಗಳು ಅದಕ್ಕೆ ಮೆರುಗು ನೀಡಿವೆ . ಮುಂದಿನ ಸಾರಿ ಇಲ್ಲಿಗೆ ನಾನೂ ಸಹ ಸೇರಿಕೊಳ್ಳುವೆ . ನಿಮ್ಮ ತಂಡದ ಪೂರ್ಣ ಕಾರ್ಯಕ್ರಮದ ವಿವರ ಎಲ್ಲರಿಗೂ ಪೂರ್ಣ ವಿಚಾರ ತಿಳಿಸುತ್ತದೆ. ಒಳ್ಳೆಯ ಅನುಭವದ ಬರಹ ನಿಮ್ಮದು .

    ReplyDelete
  4. ಅಯ್ಯೋ, ನನಗೆ ತಿಳಿಯದೆ ಹೋಯ್ತೆ???

    ReplyDelete
  5. ತುಂಬ ಒಳ್ಳೆಯ ಬರಹ. ಬಿದಿರುತಳ - ಕೊಡೆಕಲ್ಲು ಚಾರಣಕ್ಕೆ ಚಾರಣ ಹೋಗಿ ಬಂದಷ್ಟೇ ಖುಷಿಯಾಯಿತು.

    ReplyDelete
  6. ಅದೆಷ್ಟೋ ತಿಂಗಳುಗಳ ನಂತರದ ಚಾರಣವದು. . ವಿಸ್ಮಯ ಪ್ರತಿಷ್ಟಾನವ ಪರಿಚಯಿಸಿದ್ದಕ್ಕೆ ಮೊದಲ
    ಧನ್ಯವಾದ ನಿಮಗೆ.
    ಸಾಗೋ ದಾರಿ ಬೇಸಿಗೆಯ ಕಾವಿಗೆ ಸೊರಗಿದೆ ಅಂತನಿಸಿದ್ರೂ ನಂಗ್ಯಾಕೋ ಇಷ್ಟವಾಯ್ತು ಚಂದದ ಚಾರಣಿಗರ ಜೊತೆಗಿನ ಆ ದಿನ. ಜೊತೆಗೆ ಪ್ಲಾಸ್ಟಿಕ್ ರಹಿತ ಪ್ರಕೃತಿಯೆಡೆಗಿನ ಅವರ ಕಾಳಜಿ ಕೂಡಾ.
    ಎದುರು ನೋಡ್ತಿದ್ದ ಬರಹವಿದು. ಮತ್ತೊಮ್ಮೆ ಅದದೇ ಭಾವಗಳ ಜೊತೆಗೊಂದು ವಾಕ್ ಹೋಗಿ ಬಂದಂತಾಯ್ತು.

    ಬದುಕು,ಭಾವ ,ಬರಹ ಕೊನೆಯಲ್ಲಿ 'ನಿರುತ್ತರ '..... ಇದನ್ನೆಲ್ಲಾ ನಿಮಗೆ ಹೇಳಲು ತೇಜಸ್ವಿ ನನಗೆ ನಿಮಿತ್ತ.

    ReplyDelete
  7. ಗಿರೀಶ್
    ಸುಂದರ ದೃಶ್ಯಗಳು ಅಷ್ಟೇ ಸುಂದರ ನಿಮ್ಮ ವಿವರಣೆ
    ಧನ್ಯವಾದಗಳು

    ReplyDelete
  8. ಚಾರಣ ನಮ್ಮೊಳಗಿನ ಚಲನಾಶೀಲತೆಯನ್ನು ಒರೆಗೆ ಹಚ್ಚುತ್ತದೆ, ಸುಸ್ತಾಗಿ ಸಾಕು ಅನ್ನಿಸಿ ಮತ್ತೆ ಎದ್ದು ಮುನ್ನುಗ್ಗುವ ವಿಶಿಷ್ಟ ಶಕ್ತಿ ಈ ಚಾರಣಗಳಲ್ಲಿ ಸಿಗುತ್ತದೆ.
    ತೇಜಸ್ವಿ ನಾ ಓದಿದ ಅತ್ಯುತ್ತಮ ಲೇಖನಗಳ ಮಾಲೀಕ. ಓದುಗರ ಮನದೊಳಗೆ ನುಗ್ಗಿಸುವ ಅವರ ಬರಹದ ಶಕ್ತಿಯೇ ವಿಭಿನ್ನ.

    ಸುಂದರ ಚಾರಣಗಳ ಮಾಹಿತಿ. ನಿಮ್ಮ ಲೇಖನಗಳಲ್ಲಿ ಹೊರ ಹೊಮ್ಮುವ ಚಿಕ್ಕ ಚಿಕ್ಕ ಮಾಹಿತಿಗಳು ಮುದ ನೀಡುತ್ತದೆ. ಸ್ಥಳ ವಿಶೇಷ, ಊರಿನ ವಿಶೇಷ. ಎಲ್ಲವಕ್ಕೂ ವಿಶಿಷ್ಟ ಚೌಕಟ್ಟು ಒದಗಿಸುವ ಬರಹ ಸೊಗಸಾಗಿದೆ.

    ಸೂಪರ್ ಗಿರಿ

    ReplyDelete