Thursday, April 5, 2012

ತೇಜಸ್ವಿ,ನಿಮ್ಮ ಹುಡುಕುತ್ತಾ ..

ಏಪ್ರಿಲ್ ೫ ರಂದು ಪೂರ್ಣಚಂದ್ರ ತೇಜಸ್ವಿ ಅವರ ಸಂಸ್ಮರಣಾ ದಿನ.ಈ ದಿನದ ಅಂಗವಾಗಿ "ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಜೀವ ವೈವಿಧ್ಯ ಸಂಶೋಧನಾ ಕೇಂದ್ರ ಮತ್ತು ವಿಸ್ಮಯ ಪ್ರತಿಷ್ಠಾನ,ಕೊಟ್ಟಿಗೆಹಾರ" ಸಂಸ್ಥೆಯು ಒಂದು ದಿನದ ಚಾರಣ ಕಾರ್ಯಕ್ರಮವನ್ನು ಮೂಡಿಗೆರೆ ತಾಲ್ಲೂಕಿನ ಚಾರ್ಮಾಡಿ ಘಾಟ್ ಬಳಿಯ ಸೋಮನ ಹೊಳೆಯಲ್ಲಿ ಏಪ್ರಿಲ್ ಒಂದರಂದು ಹಮ್ಮಿಕೊಂಡಿತ್ತು.

ಚಾರಣದಲ್ಲಿ ಭಾಗವಹಿಸಿದ್ದ ತಂಡ
ಈ ಕಾರ್ಯಕ್ರಮಕ್ಕೆ ವಿವಿದೆಡೆ ಇಂದ ಚಾರಣ ಪ್ರಿಯರು ,ಆಸಕ್ತರು ಮತ್ತು ವಿಸ್ಮಯ ಪ್ರತಿಷ್ಠಾನದ ಸದಸ್ಯರು ಮತ್ತು ತೇಜಸ್ವಿ ಅವರ ಒಡನಾಡಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿದರು.ಈ ಸಂದರ್ಭದಲ್ಲಿ ತೇಜಸ್ವಿ ಅವರ ಸ್ನೇಹಿತರು ಮತ್ತು ಒಡನಾಡಿಗಳೂ ಆದ ಸ್ಥಳೀಯರಾದ ರಾಘವೇಂದ್ರ,ಕಾಡಿನ ಸಂತ ಪುಸ್ತಕದ ಲೇಖಕ ಧನಂಜಯ ಜೀವಾಳ, ಜೆ.ಪಿ.ಬಸವರಾಜು,ಸಂಶೋಧನಾ ಕೇಂದ್ರದ ಮೇಲ್ವಿಚಾರಕರಾದ ಬಿ.ಸಿ. ಬಾಪು ದಿನೇಶ್,ಹಳೆಕೋಟೆ ರಮೇಶ್,ಶಿವಕುಮಾರ್  ಮುಂತಾದವರು ಪಾಲ್ಗೊಂಡು ಪೂಚಂತೇ ಅವರ ಜೊತೆ ತಮ್ಮ ಒಡನಾಟ ಮತ್ತು ಅನುಭವಗಳನ್ನು ನಮ್ಮ ಜೊತೆ ಹಂಚಿಕೊಂಡರು.ಈ ಚಾರಣವು ಬೆಳಗ್ಗೆ ಪ್ರತಿಷ್ಠಾನದ ಕಚೇರಿಯಲ್ಲಿ ಉಪಹಾರ ಸೇವಿಸಿ ಅಲ್ಲಿಂದ ಸೋಮನ ಹೊಳೆವರೆಗೆ ಜೀಪಿನಲ್ಲಿ ತೆರಳಿ ಅಲ್ಲಿಂದ ಸುಮಾರು ೮ ಕಿಮಿ ವರೆಗೆ ನಡೆದು,ಕಾಡಿನ ಮಧ್ಯೆ ಊಟ ಸೇವಿಸಿ,ಕಾಡಿನಲ್ಲಿ ಸಿಕ್ಕಿದ ಹಣ್ಣುಗಳನ್ನ ತಿನ್ನುತ್ತ ಸಂಜೆಯ ವೇಳೆಗೆ ಅಂತ್ಯ ಗೊಂಡಿತು.ಈ ಸಮಯದಲ್ಲಿ ತೇಜಸ್ವಿ ಬಗ್ಗೆ ಅವರ ಸ್ನೇಹಿತರು ಹಂಚಿಕೊಂಡ ಅನುಭವಗಳು ಸಾಕಷ್ಟು.

ಕಾಫೀ ಬೆಳೆಗಾರರ ಸಂಘ:
ಸುಮಾರು ೭೦ರ ದಶಕದಲ್ಲಿ ಸಮಾಜವಾದಿ ಚಳುವಳಿ ಕರ್ನಾಟಕದಲ್ಲಿ ಬಿರುಸಾಗಿ ನಡೆಯುತ್ತಿದ್ದ ಸಮಯ.ಅದೇ ಸಮಯದಲ್ಲಿ ರಾಜ್ಯ ರೈತ ಸಂಘ ಕೂಡ ದೇಣಿ ಪದ್ಧತಿ ಮತ್ತು ಮುಂತಾದ ಕ್ರಮಗಳ ವಿರುದ್ಧ ಹೋರಾಟ ನಡೆಸುತ್ತಿತ್ತು.ಆ ಸಮಯದಲ್ಲಿ ತೇಜಸ್ವಿ ಅವರು ಮೂಡಿಗೆರೆ ಸುತ್ತಮುತ್ತಲ ಬೆಳೆಗಾರರನ್ನು ಒಗ್ಗೂಡಿಸಿ ಬೆಳೆಗಾರರ ಸಂಘವನ್ನು ಹುಟ್ಟು ಹಾಕಿದರು.ಆಗ ಈ ಸಂಘವು ರೈತ ಸಂಘದ ಜೊತೆಗೆ ಹೋರಾಟಗಳಲ್ಲಿ ಪಾಲ್ಗೊಳ್ಳುತ್ತಿತ್ತು,ಆಗ ಸ್ವತಹ ತೇಜಸ್ವಿ ಕೂಡ ರೈತರ ಜೊತೆ ಚಳುವಳಿಗಳಲ್ಲಿ ಭಾಗವಹಿಸುತ್ತಿದ್ದರಂತೆ.ತಮಾಷೆ ಮಾಡಿಕೊಂಡು ಎಲ್ಲರೊಡನೆ ಬೆರೆಯುತ್ತಿದ್ದರು ಎಂದು ಅವರ ಸ್ನೇಹಿತರು ತಿಳಿಸಿದರು.

ಆ ಸಂದರ್ಭದಲ್ಲಿ ಬೆಳಗ್ಗೆ ಇಂದ ಸಂಜೆವರೆಗೆ ಎಲ್ಲರೊಡನೆ ಬೆರೆತು ಹೋರಾಟ ಮಾಡುತ್ತಿದ್ದರಂತೆ.ಎಲ್ಲರ ಮಧ್ಯೆ ಒಬ್ಬರಂತೆ,ಯಾವುದೇ ಪ್ರತ್ಯೇಕ ಉಪಚಾರ ಬಯಸದೆ ಮಾಮೂಲಿ ಮನುಷ್ಯರಂತೆ ಇರಲು ಬಯಸುತ್ತಿದ್ದ ತೇಜಸ್ವಿಯವರಿಗೆ ಯಾರಾದರು ಉಪಚಾರ ಮಾಡಲು ಹೋದರೆ ಬೈದು ಕಳಿಸುತ್ತಿದ್ದರಂತೆ.

ಯಾರಾದರು ಇಂತಿಂತವರು ಬ್ಯಾಂಕಿನಿಂದ ಸಾಲ ತೆಗೆದು ಕೊಂಡಿದ್ದರು,ತೀರಿಸಲಾರದೆ ಆತ್ಮಹತ್ಯೆ ಮಾಡಿಕೊಂಡರು ಅಂದರೆ "ಥೂ ನನ್ ಮಕ್ಳ,ಸಾಲ ತಗಂಡವನು ಯಾಕೋ ಸಾಯಬೇಕು,ಸಾಲ ಕೊಟ್ಟವನು ನೇಣು ಹಾಕಿಕೊಂಡು ಸಾಯಬೇಕು,ಬುದ್ಧಿ ಇಲ್ಲ ಕಣ್ರಲ್ಲ ನಿಮಗೆ,ಹಿಂಗಾದ್ರೆ ಬೆಳೆಗಾರರು ಬದಕದು ಹ್ಯಾಗೆ,ನೀವ್ ಈ ಜನ್ಮದಲ್ಲಿ ಉದ್ಧಾರ ಆಗಲ್ಲ"ಅಂತ ಬೈತಿದ್ದರಂತೆ.

 ಈ ಸಂಘವನ್ನು ಸ್ಥಾಪಿಸಿದ್ದಲ್ಲದೆ ಮೂಡಿಗೆರೆಯಲ್ಲಿ SBI ತನ್ನ ಶಾಖೆಯನ್ನು ತೆರೆಯುವ ಹಿಂದೆ ಅವರ ಪರಿಶ್ರಮ ಇತ್ತು ಎಂದು ಅವರೆಲ್ಲ ನೆನಪಿಸಿಕೊಂಡರು.

ಶಿಕಾರಿ ಮತ್ತು ಮೀನು ಹಿಡಿಯುವುದು:
ತೇಜಸ್ವಿ ಅವರ ಶಿಕಾರಿಯ ಬಗ್ಗೆ ಮತ್ತು ಮೀನು ಹಿಡಿಯುವುದರ ಬಗ್ಗೆ ಹೇಳಬೇಕಾಗಿಲ್ಲ.ಅವರಿಗೆ ಅದೊಂದು ಹವ್ಯಾಸ.ಸ್ವತಹ ಕೋವಿ ಹಿಡಿದು ಶಿಕಾರಿಗೆ ಅಥವಾ ಗಾಳ ಹಿಡಿದು ಮೀನು ಹಿಡಿಯಲು ಸುತ್ತ ಮುತ್ತಲ ಹಳ್ಳಗಳಿಗೆ ಹೋಗುತ್ತಿದ್ದರಂತೆ.ಅಲ್ಲದೆ  ಅವರು ನಾನ್-ವೆಜ್ ತಿನ್ನುವುದರಲ್ಲಿ ಎತ್ತಿದ ಕೈ.ಮೀನು ಹಿಡಿಯಲು ಹೋದಾಗ ಎಷ್ಟೋ ಬಾರಿ ಅಲ್ಲೇ ಅದನ್ನು ಬೇಯಿಸಿ ತಿಂದು ಬರುತ್ತಿದ್ದರಂತೆ.ಶಿಕಾರಿಗೆ ಹೋದಾಗ ಕೂಡ ಊರಿನವರ ಜೊತೆ ಸೇರಿ ಅಡುಗೆ ಮಾಡಿ ಸೇವಿಸುತ್ತಿದರು.
ಅವರ ಸ್ನೇಹಿತರು ಹೇಳುವ ಪ್ರಕಾರ ತುಂಬ ಮಾಂಸಹಾರ ತಿನ್ನುತ್ತಿದ್ದರಿಂದ ಅವರಿಗೆ ಕೆಲವು ಹೃದಯ ಸಂಬಂಧಿ  ಕಾಯಿಲೆಗಳು ಅಂಟಿಕೊಂಡಿದ್ದವು.ಅವರಿಗೆ ತಿನ್ನುವುದರ ಬಗ್ಗೆ ಸ್ವಲ್ಪ ಕಂಟ್ರೋಲ್ ಇದ್ದಿದ್ದರೆ ಇನ್ನಷ್ಟು ವರ್ಷ ಬದುಕುತ್ತಿದ್ದರು ಎಂದು ಅವರ ಸ್ನೇಹಿತರಾದ ಬಸವರಾಜು ಅವರು ಹೇಳಿದರು.
ಇವು ಅಲ್ಲದೆ ಅವರಿಗೆ ಪೇಂಟಿಂಗ್ ನೆಚ್ಚಿನ ಹವ್ಯಾಸ ಆಗಿತ್ತು.

ಮಂತ್ರ ಮಾಂಗಲ್ಯ:
ಇದು ಕುವೆಂಪು ಅವರು ರಚಿಸಿದ ಒಂದು ಸರಳ ವಿವಾಹ ಪದ್ಧತಿ.ಕುವೆಂಪು ಅವರು ಒಂದು ಕಡೆ "ಈ ಪದ್ಧತಿಯನ್ನು ಜಾರಿಗೆ ತರಲು ತಮ್ಮ ಮಗನ  ಮದುವೆ  ತನಕ ಕಾಯಬೇಕಾಗಿ ಬಂತು" ಎಂದು ಹೇಳಿದ್ದಾರೆ.ತೇಜಸ್ವಿ ಅವರು ತಮ್ಮ ಸ್ನೇಹಿತರಾದ ಕಡಿದಾಳು ಶಾಮಣ್ಣ ಮತ್ತು ಸುಂದರೇಶ್ ಅವರ ಜೊತೆ ಸೇರಿ ಮೂಡಿಗೆರೆಯ ಸುತ್ತ ಮುತ್ತ ಎಷ್ಟೋ ಮದುವೆಗಳನ್ನು ಮಂತ್ರ ಮಾಂಗಲ್ಯ ಪದ್ಧತಿಯಲ್ಲಿ ಮಾಡಿಸಿದ್ದಾರಂತೆ.ಕೆಲವರು ಇದಕ್ಕೆ ಒಪ್ಪಿಗೆ ಕೊಟ್ಟರೆ,ಕೆಲವು ಕಡೆ ಮದುಮಕ್ಕಳು ಒಪ್ಪಿಗೆ ಇದ್ದರೆ  ಮನೆಯವರದು ಇರುತ್ತಿರಲಿಲ್ಲವಂತೆ.ಇನ್ನೂ ಕೆಲವು ಕಡೆ ಇವರ ಜೊತೆ ಜಗಳ ಮಾಡಿದವರೂ ಇದ್ದಾರೆ,ಈ ಮೂವರಿಗೂ ಹೊಡೆಯಲು ಹೋದವರೂ ಇದ್ದಾರೆ.
(ಕಡಿದಾಳು ಶಾಮಣ್ಣನವರು ಕೂಡ ತಮ್ಮ ಆತ್ಮಕಥೆ 'ಕಾಡು ತೊರೆಯ ಜಾಡು' ಪುಸ್ತಕದಲ್ಲಿ ಮಂತ್ರ ಮಾಂಗಲ್ಯದ ಪ್ರಕಾರ ಮದುವೆ ಆಗುವಂತೆ ಎಲ್ಲರನ್ನೂ  ಒತ್ತಾಯಿಸುತ್ತಿದ್ದದು,ಕೆಲವರ ಜೊತೆ ಜಗಳ ಕಾದಿದ್ದು ಎಲ್ಲ ಬರೆದಿದ್ದಾರೆ)

ಸ್ಕೂಟರ್:
ಇನ್ನು ಅವರ ಸ್ಕೂಟರ್,ಹಿಂದಿನ ಸೀಟನ್ನು ತೆಗೆದಿಟ್ಟಿದ್ದರು ಎಂಬುದಕ್ಕೆ ಹೆಸರುವಾಸಿ.ಕೆಲವರು ಹೇಳುವಂತೆ ಅವರು ಹಿಂದೆ ಯಾರನ್ನೂ ಕೂರಿಸಿಕೊಳ್ಳಲು ಇಷ್ಟ ಪಡುತ್ತಿರಲಿಲ್ಲ,ಅದಕ್ಕೂ ಕಾರಣ ಇದೆ,ಕೆಲವರು ಸುಮ್ಮನೆ ಕೂರದೆ ಇಲ್ಲಸಲ್ಲದ ವಿಚಾರಗಳನ್ನು ಮಾತಾಡುತ್ತಿದ್ದರು,ಅದು ಅವರಿಗೆ ಇಷ್ಟ ಆಗುತ್ತಿರಲಿಲ್ಲ ಮತ್ತು ಅವರ ಒಡನಾಡಿಗಳು ಒಬ್ಬರು ಹೇಳಿದಂತೆ ತೇಜಸ್ವಿ ಅವರು ಯಾವಾಗಲು ಎಲೆ ಅಡಿಕೆ ಹಾಕುತ್ತಿದ್ದರು,ಮರೆತು ಉಗಿದರೆ ಎಲ್ಲಿ ಹಿಂದೆ ಇರುವರಿಗೆ ಬೀಳುತ್ತದೆ ಎಂದು ಯಾರನ್ನು ಕೂರಲು ಬಿಡುತ್ತಿರಲಿಲ್ಲವಂತೆ.

ಅವರ ಎಷ್ಟೋ ಕಥೆಗಳಲ್ಲಿ ಬರುವ ಆ ಸ್ಕೂಟರ್ ಅನ್ನು  ಇವಾಗ ಮೂಡಿಗೆರೆಯ ತೋಟದ ಮನೆಯಲ್ಲಿ ಮೂಲೆಯಲ್ಲಿ ಪ್ಯಾಕ್ ಮಾಡಿ ಇಟ್ಟಿದ್ದಾರಂತೆ.
ಇನ್ನೊಂದು ಸ್ವಾರಸ್ಯ ಅಂದರೆ ಆ ಸ್ಕೂಟರ್ ಎಷ್ಟೇ ಕೆಟ್ಟು ಹೋಗಿ ಯಾರಾದರು ಹೊಸದು ತಗೊಳ್ಳಿ ಅಂದರೆ ಮತ್ತೆ ಅದನ್ನೇ ರಿಪೇರಿ ಮಾಡಿಸಿಕೊಳ್ಳುತ್ತಿದ್ದರು.ಅಲ್ಲದೆ ಅವರ ಸ್ನೇಹಿತರು ಕೂಡ  ಅವರ ಸ್ಕೂಟರ್ ಹಿಂದೆ ಸವಾರಿ ಮಾಡಿಲ್ಲವಂತೆ.

ಬಿರಿಯಾನಿ ಕರಿಯಪ್ಪ:
ನಮ್ಮ ಚಾರಣ ತಂಡದಲ್ಲಿದ್ದ ಸ್ಥಳೀಯರಾದ ರಮೇಶ್ ಎಂಬುವವರು ಬೇರೆ ಉರಿನಲ್ಲಿ ಡಿಗ್ರಿ ಮಾಡುತ್ತಿದ್ದಾಗ ಅವರಿಗೆ ಕರ್ವಾಲೋ ಕಾದಂಬರಿಯು ಪಾಠ ವಾಗಿತ್ತಂತೆ.ಇವರು ಮೂಡಿಗೆರೆಯವರು  ಎಂದು ತಿಳಿದಾಗ ಸ್ನೇಹಿತರು,ಉಪನ್ಯಾಸಕರಾದಿಯಾಗಿ ತೇಜಸ್ವಿ ಅವರ ಬಗ್ಗೆ ಕೇಳುತ್ತಿದ್ದರಂತೆ.ಅದಕ್ಕಿಂತ ಮುಖ್ಯವಾಗಿ ಆ ಕಾದಂಬರಿಯಲ್ಲಿ ಬರುವ ಬಿರಿಯಾನಿ ಕರಿಯಪ್ಪನ ಬಗ್ಗೆ ಕೇಳುತ್ತಿದ್ದರಂತೆ.ಅವಾಗ ಇವರಿಗೆ ತೇಜಸ್ವಿ ಅವರ ಪರಿಚಯ ಇರಲಿಲ್ಲ.ಕಾಲೇಜಿನಲ್ಲಿ ಎಲ್ಲರೂ ಕೇಳುವುದಕ್ಕೆ ರೋಸಿ ಹೋಗಿ "ಹೇ ಆ ಕರಿಯಪ್ಪ ಸತ್ತೋಗೆ ತುಂಬ ವರ್ಷ ಆಯ್ತು"ಅಂದಿದ್ದರಂತೆ.ಎಷ್ಟೋ ದಿನಗಳ ನಂತರ ಗೊತ್ತಾಗಿದ್ದು ಆ ಕರಿಯಪ್ಪ ಇನ್ನೂ ಬದುಕಿದ್ದಾನೆ ಅಂತ.

ಆ ಕರಿಯಪ್ಪನಿಂದ ಬಿರಿಯಾನಿ ಮಾಡಿಸಿಕೊಂಡು ತಿನ್ನ ಬೇಕೆಂಬುದು ಎಲ್ಲರ ಆಸೆ ಆಗಿತ್ತಂತೆ.

ಸಹಜ ಕೃಷಿ:
ಇನ್ನು ಫುಕುಹೊಕಾರ ಸಹಜ ಕೃಷಿ ಪದ್ದತಿ ಅನುಸರಿಸಲು ಹೋಗಿ ಪಟ್ಟ ಪಾಡನ್ನು 'ಸಹಜ ಕೃಷಿ' ಪುಸ್ತಕದಲ್ಲಿ ಹೇಳಿಕೊಂಡಿದ್ದಾರೆ.ಆಗ ಅವರಿಗೆ ಇದರ ಬಗ್ಗೆ ತಲೆ ತಿಂದಿದ್ದು ಅವರ ಸ್ನೇಹಿತರಾದ ದಿನೇಶ್ ಎಂಬುವವರೆಂದು ಅವರ  ಒಡನಾಡಿ  ಒಬ್ಬರು  ಹೇಳಿದರು.ಇದರ ಪರಿಣಾಮ ಎಷ್ಟೋ ಕಾಫೀ ತೋಟವನ್ನು ಕಡಿದು ಭತ್ತ  ಬೆಳೆಯಲು ಹೋಗಿದ್ದು,ಕೊನೆಗೆ ಬಿತ್ತಿದ್ದ  ಭತ್ತವೆಲ್ಲ ಹಕ್ಕಿಗಳು ತಿಂದು ನಾಶ ಪಡಿಸಿದ್ದು ,ಅಲ್ಲದೆ ಬೇರೆಯವರಿಗೆ ಕೂಡ ಸಹಜ ಕೃಷಿಯನ್ನು  ಅಳವಡಿಸಿಕೊಳ್ಳುವಂತೆ  ಪ್ರೇರೇಪಿಸುತ್ತಿದ್ದದ್ದು  ಎಲ್ಲದನ್ನು  ಹಂಚಿಕೊಂಡರು.

ಕೊನೆಯದಾಗಿ ಕೊಟ್ಟಿಗೆಹಾರದಿಂದ  ಮೂಡಿಗೆರೆಗೆ ಬರುವಾಗ ನಮ್ಮ ಜೊತೆ ಇದ್ದ ಹರ್ಷ ಎಂಬ ಸ್ಥಳೀಯ ತಾನು ಶಾಲೆಗೆ  ಹೋಗುವಾಗ  ಹ್ಯಾಂಡ್ ಪೋಸ್ಟ್ ಬಳಿ ಅವರನ್ನು ನೋಡುತ್ತಿದ್ದೆ ಎಂದು  ಯಾವಾಗಲೂ  ಅವರ ಜೊತೆ ಕ್ಯಾಮೆರ ಇರುತ್ತಿತ್ತು,ಅವರ ಹಿಂದೆ ಅವರ ಮನೆಯ ನಾಯಿ 'ಕಿವಿ' ಇರುತ್ತಿತ್ತು ಎಂದು ತನ್ನ ಹಳೆ ನೆನಪುಗಳನ್ನು ನಮ್ಮೊಡನೆ ಹಂಚಿಕೊಂಡರು.ಅವರನ್ನು ತಾನು ನೀಲಿ ಬಣ್ಣದ  ಅಂಗಿಯಲ್ಲಿ  ಜಾಸ್ತಿ ನೋಡಿದ್ದು ಎಂದು ಕೂಡ ಹೇಳಿದರು.
ಇನ್ನೊಂದು ವಿಷಯ ಆತ ಹೇಳಿದಂತೆ ಅಲ್ಲಿ ತೇಜಸ್ವಿ ಅವರಿಗೆ ಯಾವುದೇ ತರಹದ ಡಿಸ್ಟರ್ಬ್ ಇರಲಿಲ್ಲ,ಮುಖ್ಯವಾಗಿ ಜನರಿಂದ.ಬೇರೆ ಕಡೆ ಹಾಗೆ ಯಾರಾದರು ಸ್ವಲ್ಪ ದೊಡ್ಡ ವ್ಯಕ್ತಿ ಬಂದರೆ ಅವರ ಹಿಂದೆ ಸುತ್ತುವ ಹಾಗೆ ಅಲ್ಲಿ ಅಂತ ಪರಿಸ್ಥಿತಿ ಇರಲಿಲ್ಲ..ಒಬ ಸಾಮಾನ್ಯ ಮನುಷ್ಯನಂತೆ ಸ್ವಚ್ಚಂದವಾಗಿ ಸ್ವತಂತ್ರವಾಗಿ ಓಡಾಡಿ ಕೊಂಡಿರಲು ಅವರಿಗೆ ಅವಕಾಶ ಇತ್ತು.ಹಾಗಾಗಿಯೇ ಅವರು ಆ ಉರು ಬಿಟ್ಟು ಬೇರೆ ಕಡೆ ಹೋಗದೆ ಅಲ್ಲೇ ನೆಲೆಸಿದ್ದು ಎಂದು ಹೇಳಿದರು.

ಇನ್ನೊಂದು ವಿಷಯ ಅಂದಂತೆ ಮೂಡಿಗೆರೆ ಸುತ್ತಮುತ್ತ ಜನ ತೇಜಸ್ವಿ ಅವರನ್ನು ಒಬ್ಬ ಲೇಖಕನಾಗಿ ಗುರುತಿಸಿದ್ದು ಬಹಳ ಕಡಿಮೆ,ಬದಲಾಗಿ ಅವರ ಛಾಯಾಚಿತ್ರ ಮತ್ತು ಇನ್ನಿತರ ಚಟುವಟಿಕೆಗಳ ಮುಖಾಂತರ ಗುರುತಿಸಿದ್ದೆ ಹೆಚ್ಚು.

ವಿಸ್ಮಯ ಪ್ರತಿಷ್ಠಾನ,ಕೊಟ್ಟಿಗೆಹಾರ


ಹೀಗೆ ಚಾರಣದ ಸಮಯದಲ್ಲಿ ಅವರ ಒಡನಾಡಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡರು.
ಈ ಚಾರಣ ಕಾರ್ಯಕ್ರಮವನ್ನು ಏರ್ಪಡಿಸಿದ್ದ ವಿಸ್ಮಯ ಪ್ರತಿಷ್ಠಾನಕ್ಕೆ ಅಭಿನಂದನೆಗಳು ಮತ್ತು ತೇಜಸ್ವಿ ಬದುಕು-ಬರಹ ಚಿಂತನೆಗಳನ್ನು ಪಸರಿಸಲು ಅವರು ಹಮ್ಮಿಕೊಳ್ಳುತ್ತಿರುವ ಎಲ್ಲ ಕಾರ್ಯಕ್ರಮಗಳು ಮತ್ತು ಸಂಸ್ಥೆಯ ಆಶಯಗಳಿಗೆ ಶುಭ ಕೋರುತ್ತೇನೆ.

                             (ಅವಧಿಯಲ್ಲಿ ಈ ಲೇಖನ ಪ್ರಕಟಗೊಂಡಿದೆ ತೇಜಸ್ವಿ,ನಿಮ್ಮ ಹುಡುಕುತ್ತಾ ..)

10 comments:

  1. ಒಳ್ಳೆ ಅನುಭವ ಕಥನ :) ಚೆನ್ನಾಗಿದೆ :)

    ReplyDelete
  2. ನನ್ನ ನೆಚ್ಚಿನ ಲೇಖಕರ ಬಗ್ಗೆ ಸುಂದರ ಬರಹ.ಧನ್ಯವಾದಗಳು.

    ReplyDelete
  3. ಧನ್ಯವಾದಗಳು ಉತ್ತಮ ಬರಹಕ್ಕಾಗಿ...ಹಲವಾರು ಇಂತಹ ಸಂಗತಿಗಳು ಬೆಳಕಿಗೆ ಬಾರದೇ ಹೋಗುತ್ತವೆ,ಅದನ್ನು ಸರಳವಾಗಿ ನಿರೂಪಿಸಿದ್ದೀರಿ...ಧನ್ಯವಾದ..

    ಇತಿ ನಿಮ್ಮನೆ ಹುಡುಗ,
    ಚಿನ್ಮಯ ಭಟ್

    ReplyDelete
  4. ಸುಷ್ಮಾ,ಈಶ್ವರ ಕಿರಣ,ಕೃಷ್ಣ ಮೂರ್ತಿ ಸರ್ ,ಚಿನ್ಮಯ್ ಭಟ್..ಎಲ್ಲರಿಗೂ ಧನ್ಯವಾದಗಳು...

    ReplyDelete
  5. ಚೆನ್ನಾಗಿದೆ ಲೇಖನ :-)
    ಒಳ್ಳೊಳ್ಳೆಯ ಮಾಹಿತಿಗಳಿಗೆ ಧನ್ಯವಾದಗಳು :-)

    ReplyDelete
  6. ಪ್ರಶಸ್ತಿ,ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು....ಹೀಗೆ ಇತ್ತ ಭೇಟಿ ಕೊಡುತ್ತಿರಿ...

    ReplyDelete
  7. ಅವರ ಪುಸ್ತಕ ಓದಲು ಶುರು ಮಾಡಿದ್ದು..ಎರಡನೇ ಪಿ.ಯು.ಸಿ.ಯಲ್ಲಿ ಇದ್ದ ಕರ್ವಾಲೋ ಪುಸ್ತಕ...ಅವರ ಬರವಣಿಗೆಯಾ ಶೈಲಿ ತುಂಬಾ ಇಷ್ಟವಾಯಿತು..
    ಜುಗಾರಿ ಕ್ರಾಸ್ ನಿದ್ದೆಗೆಡಿಸುತ್ತದೆ...ಇಂತಹ ಮಹಾನ್ ಚೇತನ ನಮ್ಮ ನಾಡಲ್ಲಿ ಹುಟ್ಟಿದ್ದು ನಮ್ಮ ಅದೃಷ್ಟವೇ ಸರಿ..ಸುಂದರ ಲೇಖನ...ಪೂಚಂತೆ ಅವರ ಎಷ್ಟು ವಿಚಾರಗಳನ್ನ ನಿಮ್ಮ ಲೇಖನದಲ್ಲಿ ಪರಿಚಯ ಮಾಡಿಸಿದ್ದೀರ..ಅಭಿನಂದನೆಗಳು ಗಿರೀಶ್..

    ReplyDelete
  8. ಧನ್ಯವಾದಗಳು ಗಿರೀಶಣ್ಣ.. ತೇಜಸ್ವಿಯವರು ಮೂಡಿಗೆರೆಯಂತಹ ಊರಿನಲ್ಲಿ ಬದುಕಿದ ರೀತಿಯ ಕುರಿತು ಅವರ ಒಡನಾಡಿಗಳ ಮಾತುಗಳನ್ನು ಹಂಚಿಕೊಂಡಿದ್ದಕ್ಕೆ.. ಒಳ್ಳೆಯ ಬರಹ..

    ReplyDelete
  9. ಲೇಖನ ಇಷ್ಟ ಪಟ್ಟ ಶ್ರೀಕಾಂತ್ ಸರ್ ಮತ್ತು ಅಜಯ್ ಇಬ್ಬರಿಗೂ ಧನ್ಯವಾದಗಳು ... ತೇಜಸ್ವಿ ಎಂದಿಗೂ ವಿಸ್ಮಯವೆ ಸರಿ !!!

    ReplyDelete