Wednesday, June 27, 2012

"ಪುಸ್ತಕ ಮನೆ" ಎಂಬ ವಿಸ್ಮಯ ಲೋಕದ ಸುತ್ತ !!!!



ಕಳೆದ ವಾರ ಒಂದಿಷ್ಟು ಜನ ಬ್ಲಾಗಿಗರೆಲ್ಲರೂ ಸೇರಿ "ಪುಸ್ತಕ ಮನೆ" ಎಂಬ ವಿಶಿಷ್ಟ,ವಿಸ್ಮಯ ಲೋಕಕ್ಕೆ ಹೋಗಿದ್ದೆವು.ಅದೊಂದು ಪುಸ್ತಕದ ಸಾಗರ,ಅಲ್ಲಿ ಯಾವ ವಿಷಯಕ್ಕೆ ಸಂಬಂಧಿಸಿದ ಪುಸ್ತಕ ಬೇಕಾದರೂ ಸಿಗುತ್ತದೆ,ಅದು ಕೇವಲ ಒಬ್ಬ ವ್ಯಕ್ತಿ ತನ್ನ ಜೀವಮಾನವಿಡಿ ದುಡಿದ ದುಡ್ಡಿನಿಂದ ಕೊಂಡ ಪುಸ್ತಕಗಳು.ನಿಸ್ವಾರ್ಥತೆಯಿಂದ ತನ್ನ ಜೀವನವನ್ನು ಕೇವಲ ಪುಸ್ತಕ ಸಂಗ್ರಹಕ್ಕಾಗಿ ಯೋಜಿಸಿ ಕೂಡಿಟ್ಟ ಪುಸ್ತಕಗಳು.ಇಂಥ ಒಂದು ಸರಸ್ವತಿ ಲೋಕದ ನಿರ್ಮಾತೃ,ಶ್ರೀಯುತ ಅಂಕೇಗೌಡರು.
ಪುಸ್ತಕ ಮನೆಗೆ ಭೇಟಿ ಕೊಡುವ ಮೊದಲು ಅವರ ಬಗ್ಗೆ ಒಂದಿಷ್ಟು ತಿಳಿದುಕೊಳ್ಳೋಣ,ತಮ್ಮ ಶಿಕ್ಷಣದ ನಂತರ ಕೆಲ ಸಮಯ ರಾಜ್ಯ ಸಾರಿಗೆ ಸಂಸ್ಥೆಯಲ್ಲಿ ನಿರ್ವಾಹಕರಾಗಿ ಸೇವೆ ಸಲ್ಲಿಸಿ,ನಂತರ ಮೈಸೂರಿನಲ್ಲಿ ಡಿಗ್ರಿ ಮುಗಿಸಿ ಓದಿನ ನಂತರ ಪಾಂಡವಪುರ ಸಕ್ಕರೆ ಕಾರ್ಖಾನೆ ಯಲ್ಲಿ ಟೈಮ್ ಆಫಿಸರ್ ಆಗಿ ಕೆಲಸಕ್ಕೆ ಸೇರಿ ಕೊಂಡರು.ತಮ್ಮ ಗುರುಗಳಾದ ಕೆ.ಅನಂತರಾಮು ಅನ್ನುವವರು "ಮನುಷ್ಯನಿಗೆ ಒಳ್ಳೆಯ ಹವ್ಯಾಸಕ್ಕಿಂತ ಮೌಲ್ಯಯುತವಾದ ಗುಣ ಯಾವುದು ಇಲ್ಲ,ಪುಸ್ತಕಗಳನ್ನು ಸಂಗ್ರಹಿಸು,ಬಡವರಿಗೆ ಸಹಾಯ ಆಗಬಹುದು" ಎಂದಿದ್ದರಂತೆ,ಅದನ್ನೇ ತಲೆಯಲ್ಲಿಟ್ಟುಕೊಂಡು ಮುಂದೆ ಸಂಗ್ರಹ ಕಾರ್ಯಕ್ಕೆ ನಾಂದಿ ಹಾಡಿದರು.ಅದರ ಪ್ರತಿಫಲವೇ ಇಂದು ನಮ್ಮೆದುರಿಗೆ ಕಂಡ ರಾಶಿ ರಾಶಿ ಪುಸ್ತಕ.
ಅವರ ಕೆಲಸದಲ್ಲಿದ್ದಾಗ ತಮ್ಮ ಕ್ವಾಟ್ರಸ್ ತುಂಬಾ ಬರಿ ಪುಸ್ತಕಗಳೇ ಇದ್ದವಂತೆ,ಮಧ್ಯದಲ್ಲಿ ಒಬ್ಬರಿಗೆ ಓಡಾಡಲು ಜಾಗ ಬಿಟ್ಟರೆ,ಇನ್ನೆಲ್ಲ ಜಾಗ ಪುಸ್ತಕಗಳಿಂದ ತುಂಬಿತ್ತು,ನಂತರ ಆ ಕೆಲಸದಿಂದ ಸ್ವಯಂ ನಿವೃತ್ತಿ ಪಡೆದು ಬಂದ ಪಿ.ಎಫ್ ಹಣ,ಅಲ್ಲದೆ ತಮ್ಮ ಗದ್ದೆಯಲ್ಲಿ ಬೆಳೆದಿದ್ದ ಕಬ್ಬು ಮಾರಿ ಬಂದ ಹಣ,ಎಲ್.ಐ.ಸಿ ಏಜೆಂಟ್ ಆಗಿ ದುಡಿದಿದ್ದ ಹಣ,ಅದೂ ಸಾಲದೆ ಮೈಸೂರಿನಲ್ಲಿದ್ದ ತಮ್ಮ ನಿವೇಶನವನ್ನು ಕೂಡ ಮಾರಿ ಅದರಿಂದ ಬಂದ ಹಣವನ್ನು ಪುಸ್ತಕ ಸಂಗ್ರಹಕ್ಕಾಗಿ ಬಳಸಿದ್ದಾರೆ.ಒಂದು ಸಮಯದಲ್ಲಿ ಆ ಪುಸ್ತಕಗಳನ್ನು ಸರಿಯಾಗಿ ಜೋಡಿಸುವ ಕಾರ್ಯ ಆಗಲಿ,ಅವುಗಳನ್ನು ಸರಿಯಾದ ರೀತಿಯಲ್ಲಿ ನೋಡಿಕೊಳ್ಳುವುದೇ ಅಂದು ಜವಾಬ್ದಾರಿ ಕೆಲಸ ವಾಗಿತ್ತು,ಆ ಸಮಯದಲ್ಲಿ ಅವರ ಆಪ್ತ ಸ್ನೇಹಿತರೆಲ್ಲರೂ ಸೇರಿ ಒಂದು ಯೋಜನೆ ರೂಪಿಸಲು ನಿರ್ಧರಿಸಿದ್ದರು.ಅದೇ ಸಮಯದಲ್ಲಿ ಕೆ.ಅರ್.ಎಸ್ ನ ಹಿನ್ನೀರಿನಲ್ಲಿ  ಮುಳುಗಿ ಹೋಗಿದ್ದ ವೇಣು ಗೋಪಾಲ ಸ್ವಾಮೀ ದೇವಸ್ಥಾನವನ್ನು ಸ್ಥಳಾಂತರಿಸುವ ಕಾರ್ಯ ನಡೆಯುತ್ತಿತ್ತು,ಅದನ್ನು ಖ್ಯಾತ ಉದ್ಯಮಿ  ಶ್ರೀ ಹರಿ ಖೋಡೆಯವರು ನಿಭಾಯಿಸುತ್ತಿದ್ದರು,ಆ ಸಮಯದಲ್ಲಿ ಈ ಪುಸ್ತಕ ಸಂಗ್ರಹಣೆಯ ಮತ್ತು ಅವುಗಳಿಗೆ ಸರಿಯಾದ ವ್ಯವಸ್ಥೆ ಇಲ್ಲದಿರುವುದನ್ನು   ಸ್ಥಳೀಯರಿಂದ ಮನಗಂಡ ಖೋಡೆಯವರು ಅಂಕೇಗೌಡರ ಸಹಾಯಕ್ಕೆ ಬಂದರು.

ಈ ಪುಸ್ತಕ ಸಂಗ್ರಹಣೆಗೆ ಮನಸೋತ ಖೋಡೆಯವರು ಅಂಕೇಗೌಡರಿಗೆ ಹಣ ಸಹಾಯ ಮಾಡಲು ಮುಂದೆ ಬಂದಾಗ ಅವರು ತಮಗೆ ಹಣಕ್ಕಿಂತ ಈ ಪುಸ್ತಕಗಳಿಗೆ ಒಂದು ಸರಿಯಾದ ವ್ಯವಸ್ಥೆ ಮಾಡಿಕೊಟ್ಟರೆ ಸಾಕು ಎಂದಾಗ ಖೋಡೆಯವರು ಒಬ್ಬ ಇಂಜಿನಯರ್ ಮತ್ತು ಅವರೊಂದಿಗೆ ನಲವತ್ತು ಜನ ಸಹಾಯಕರನ್ನು ಆ ಪುಸ್ತಕಗಳ ವಿಂಗಡಣೆ ಮಾಡಲು ಕಳುಹಿಸಿಕೊಟ್ಟರು,ನಂತರ ಆ ಗ್ರಾಮದಲ್ಲಿ ಒಂದು ಹಳೆಯ ಟೆಂಟ್ ಅನ್ನು ಕೊಂಡು ಅದನ್ನು ಅಂಕೇಗೌಡ ಜ್ಞಾನ ಪ್ರತಿಷ್ಠಾನದ ಹೆಸರಿಗೆ ನೊಂದಾಯಿಸಿ ಕೊಟ್ಟಿದ್ದಾರೆ.ಆ ಸಮಯದಲ್ಲಿ ಸುತ್ತಮುತ್ತಲಿನ ಹಳ್ಳಿಯ ಜನ ನಾ ಮುಂದು ತಾ ಮುಂದು ಅನ್ನುವ ಹಾಗೆ ಆ ವಿಂಗಡಣೆ ಕಾರ್ಯ ನಡೆಯುವಾಗ ಆ ಕೆಲಸದವರಿಗೆ ಪ್ರತಿ ದಿನ ಊಟ ತಿಂಡಿಯ ವ್ಯವಸ್ಥೆ ಮಾಡಿ ಕೊಟ್ಟಿದ್ದನ್ನು ಶ್ರೀಯುತರು ಸ್ಮರಿಸಿದರು.ಅಲ್ಲದೆ ಅವರ ಕೆಲವು ಆಪ್ತ ಸ್ನೇಹಿತರು ಕೂಡ ಅವರಿಗೆ ತುಂಬಾ ಸಹಾಯ ಮಾಡಿದ್ದಾರೆ ಎಂದು ಕೂಡ ಹೇಳಿದರು.
ಯಾವ ಸಂಸ್ಥೆಯಲ್ಲಿ ಇಲ್ಲದ ಪುಸ್ತಕಗಳು ಕೂಡ ಇಲ್ಲಿ ಸಿಗುತ್ತವೆ,ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಇಲ್ಲಿಗೆ ತಮ್ಮ ಅಧ್ಯಯನಕ್ಕೆ ಅವಶ್ಯ ಇರುವ ಹೆಚ್ಚಿನ ಪುಸ್ತಕಗಳನ್ನು ಹರಸಿ ಇಲ್ಲಿಗೆ ಬರುತ್ತಾರೆ.ಇಲ್ಲಿ ಜೈನ ಸಾಹಿತ್ಯ,ಶರಣ ಸಾಹಿತ್ಯ,ದಾಸ ಸಾಹಿತ್ಯ,ಪುರಾಣ,ಹಳ ಗನ್ನಡ ಕೃತಿಗಳು,ಕಥಾ ಸಂಕಲನಗು,ಕಾವ್ಯ ಸಂಕಲನಗಳು,ಕಾದಂಬರಿ,ಪ್ರಭಂದ,ಆತ್ಮ ಚರಿತ್ರೆ,ನಾಟಕಗಳು,ಇನ್ನು ಯಾವ್ಯಾವ ಸಾಹಿತ್ಯ ಪ್ರಕಾರಗಳು ಇವೆಯೋ ಅವೆಲ್ಲವೂ ಕೂಡ ಇಲ್ಲಿ ಸಿಗುತ್ತದೆ,ಅಲ್ಲದೆ ದೇಶ ವಿದೇಶದ ನಾಣ್ಯಗಳು,ಹಳೆ ಕಾಲದ ಲಗ್ನ ಪತ್ರಿಕೆಗಳು ,ಅದಕ್ಕಿಂತ ಮಿಗಿಲಾಗಿ ಭಾರತದ ರಾಜ ಮಹಾರಾಜರುಗಳ ಫೋಟೋಗಳು ಸಿಗುತ್ತವೆ...

.ಅಲ್ಲದೆ  ಶತಮಾನಗಳಷ್ಟು  ಹಳೆಯ   ಪುಸ್ತಕಗಳು ಇಲ್ಲಿ ಸಿಗುತ್ತವೆ.ಅದೆಲ್ಲದಕ್ಕಿಂತ ನಮಗೆ ಒಂದು ಆಶ್ಚರ್ಯ ಕಾದಿತ್ತು.ಇದುವರೆಗೆ ಕನ್ನಡದಲ್ಲಿ ಕಿಟ್ಟೆಲ್ ನ ಶಬ್ದಕೊಶವೇ ಮೊದಲನೆಯದು ಎಂದು ಭಾವಿಸಿದ್ದ ನಮಗೆ ಅಲ್ಲಿ ಒಂದು ಸತ್ಯ ಗೋಚರವಾಯಿತು.ಕಿಟ್ಟೆಲ್ ನ ಶಬ್ದಕೊಶ ಬಂದಿದ್ದು ೧೮೯೪ರಲ್ಲಿ,ಅದಕ್ಕಿಂತ ಮುಂಚೆಯೇ ಇದ್ದ ಶಬ್ದಕೋಶ ಅಂದರೆ " A Dictionary-Carnese and English" by Rev W.Reeve ಎಂಬುದು...ಅಲ್ಲಿ ಇದ್ದಿದ್ದು ಇದರ ಪರಿಷ್ಕೃತ ಆವೃತ್ತಿ "Revised,enlarged and corrected by Daniel Sanderson"..Daniel Sanderson ಎಂಬಾತ ಆ ಶಬ್ದಕೋಶವನ್ನು ೧೮೫೮ರಲ್ಲಿ ಪರಿಷ್ಕರಿಸಿದ್ದಾನೆ,ಅಂದರೆ ೧೮೫೮ಕ್ಕಿನ್ತ ಹಳೆಯದು ಎಂಬುದು.ಅಲ್ಲದೆ ಇದು ಸುಮಾರು ೧೦೦೦ ಪುಟಗಳಿಷ್ಟಿದೆ.
೧೮೫೮ರಲ್ಲಿ ಪ್ರಕಟಗೊಂಡಿರುವ ಶಬ್ದಕೋಶ 
ಇಷ್ಟೇ ಅಲ್ಲದೆ ಅಲ್ಲಿ  ಕೇವಲ ಕನಡದ ಪುಸ್ತಕಗಳು ಮಾತ್ರ ಸಿಗುವುದಿಲ್ಲ,ಬದಲಾಗಿ ತಮಿಳು,ತೆಲುಗು,ಕೊಡವ,ಉರ್ದು,ಮಲಯಾಳಂ,ಆಂಗ್ಲ,ಫ್ರೆಂಚ್,ಜಪಾನಿ,ಚೀನಿ ಪುಸ್ತಕಗಳು ಸಿಗುತ್ತವೆ,ಅಲ್ಲದೆ ಜಗತ್ತಿನ ಶ್ರೇಷ್ಠ ಕೃತಿಗಳು ಇಲ್ಲಿ ಲಭ್ಯ, ಶೇಕ್ಸ್ಪಿಯರ್ ನ ಕೃತಿಗಳು,ವರ್ಡ್ ವರ್ತ್,ಸಿಡ್ನಿ  ಶೆಲ್ದೊನ್ ನ ಕಾದಂಬರಿಗಳು ಸಿಗುತ್ತವೆ.ವೈಜ್ಞಾನಿಕ,ಭೌಗೋಳಿಕ,ಇತಿಹಾಸ,ವಾಸ್ತು ಶಿಲ್ಪಿ,ಶಿಲ್ಪಕಲೆ,ಇನ್ನು ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ..ಹಾಗೆ ಅಲ್ಲಿ ಸಿಗದ ವಿಷಯ ಇಲ್ಲ.." You give the topic,he will get you the book" ಎಂಬುದು ಆ ಪುಸ್ತಕ ಮನೆಯ ಸೂತ್ರ....

ಇಷ್ಟೇ ಅಲ್ಲದೆ ಮೈಸೂರು  ವಿಶ್ವ ವಿದ್ಯಾನಿಲಯದ ಸ್ನಾತಕೋತ್ತರ ವಿಧ್ಯಾರ್ಥಿ ಒಬ್ಬರು ಇವರ ಬಗ್ಗೆ ಪ್ರಭಂದವನ್ನು ಮಂಡಿಸಿದ್ದಾರೆ.ಒಂದು ವಿಶ್ವ ವಿದ್ಯಾಲಯದ ಸ್ನಾತಕೋತ್ತರ ಪದವಿಗೆ ಇವರು ವಿಷಯ ಆಗಿದ್ದಾರೆ ಅಂದರೆ ಅದಕ್ಕಿಂತ ಹಿರಿಮೆ,ಸಾರ್ಥಕತೆ ಬೇಕೇ?

ಈ ಪುಸ್ತಕ ಮನೆಯಿಂದ ಸುತ್ತಮುತ್ತಲ ಬಡ ವಿದ್ಯಾರ್ಥಿಗಳಿಗೆ,ಅಲ್ಲದೆ ಮೈಸೂರು,ಮಂಡ್ಯದಿಂದ ಕೂಡ ಪದವಿ ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಅನುಕೂಲವಾಗಿದೆ.ಇದೆಲ್ಲದರ ಹಿಂದೆ ಅವರ ಅವಿರತ ಪರಿಶ್ರಮ ಇದೆ,ಅದಕ್ಕಿಂತ ಮಿಗಿಲಾಗಿ ಆ ಒಂದು ದೃಷ್ಟಿಕೋನ ಅವರಲ್ಲಿದೆ.ಇಲ್ಲಿ ಅಂಕೇಗೌಡ ರನ್ನು ಮತ್ತು ಅವರ ಕಾಯಕವನ್ನು ಮೆಚ್ಚುವುದಕ್ಕಿಂತ ಹೆಚ್ಚಾಗಿ ಅವರ ಶ್ರೀಮತಿಯವರಾದ ಜಯಲಕ್ಷ್ಮಿ ಅವರಿಗೆ ಕೂಡ ಕೋಟಿ ಪ್ರಣಾಮಗಳನ್ನು ಸಲ್ಲಿಸಬೇಕು,ಈ ಒಂದು ಕೆಲಸದ ಹಿಂದೆ ಅವರ ಪರಿಶ್ರಮ ಮತ್ತು ಅವರ ಸೇವೆ ಕೂಡ ಮಿಗಿಲಾದದ್ದು.ಈ ಒಂದು ಗ್ರಂಥಾಲಯದ ಹಿಂದೆ ಅವರು ಪಟ್ಟಿದ್ದು ಶ್ರಮ ಮಾತ್ರ ಅಲ್ಲ,ನೋವು,ಅವಮಾನವನ್ನು ಕೂಡ ಸಹಿಸಿಕೊಂಡಿದ್ದಾರೆ.ಕೆಲವರು ಇವರನ್ನು "ಹುಚ್ಚರಂತೆ ಏನೇನೋ ಮಾಡ್ತಾರೆ" ಎಂದು ಕೂಡ ನಿಂದಿಸಿದ್ದಾರೆ,ಎಂದು ತಮ್ಮ ಹಳೆಯ ನೆನಪುಗಳನ್ನು ಹೇಳಿಕೊಂಡರು.

ಅಲ್ಲಿಗೆ ಭೇಟಿ ಕೊಡುವ ಪ್ರತಿಯೊಬ್ಬರನ್ನು ಕೂಡ ಬಹಳ ವಿನಮ್ರತೆಯಿಂದ ,ಸೌಜನ್ಯದಿಂದ ಮಾತಾಡಿಸುತ್ತಾರೆ,ಸತ್ಕರಿಸುತ್ತಾರೆ.ಅದು ಅವರ ದೊಡ್ಡ ಗುಣ...


ಅಲ್ಲಿನ ಕೆಲವು ಪುಸ್ತಕಗಳತ್ತ ಒಂದು ಕಣ್ಣು ಹಾಯಿಸೋಣ..







ಎಂಥಾ ಸೌಜನ್ಯ..

ಅವರ್ರ ಸಾಧನೆಗೆ ದೊರೆತ ಪ್ರತಿಫಲ...ಇನ್ನು ಸಾಕಷ್ಟು ಪ್ರಶಸ್ತಿ ಪತ್ರಗಳು ಅಲ್ಲಲ್ಲಿ ಇದ್ದವು.


ಭಾರತದ ಎಷ್ಟೋ ರಾಜರುಗಳ ಫೋಟೋಗಳು ಇಲ್ಲಿ ಸಿಗುತ್ತವೆ






ಗ್ರಂಥಾಲಯದ ಒಳ ನೋಟ
50 Wonders of teh World ಎಂಬ ಪುಸ್ತಕವನ್ನು ತೋರಿಸುತ್ತಿದ್ದಾರೆ..


ಇಷ್ಟೆಲ್ಲಾ ಸಂಗ್ರಹಣೆಗೆ ಸಾಥ್ ನೀಡಿದ ಅವರ ಪತ್ನಿಯೊಂದಿಗೆ ಅಂಕೇಗೌಡರು

ಅವರ ಆಪ್ತ ಸ್ನೇಹಿತರು..


ಮಹಾಯುದ್ಧಕ್ಕೆ ಸಂಭದಿಸಿದ್ದು


Encyclopedia
ಎಲ್ಲೆಲ್ಲೂ ಪುಸ್ತಕದ ರಾಶಿ

ಸುಧಾ ಪತ್ರಿಕೆಯ ಮೊದಲ ಸಂಚಿಕೆ ಬಂದಿದ್ದು ಜನವರಿ ೧೧,೧೯೬೫ ರಲ್ಲಿ..ಅದರ ಒಳಪುಟ....

ಸುಧಾ ವಾರ ಪತ್ರಿಕೆಯ ಮೊದಲ ಸಂಚಿಕೆ


ಎಲ್ಲೆಲ್ಲೂ ಪುಸ್ತಕದ ರಾಶಿ
ಸರಳ ಸಜ್ಜನಿಕೆಯ ಅಂಕೇಗೌಡರು

ಸರಸ್ವತಿ ಸಾಗರದ ಮಧ್ಯೆ ನಮ್ಮ ಬ್ಲಾಗಿಗರ ತಂಡ

ಇಷ್ಟೊಂದು ಪುಸ್ತಕ ಸಂಗ್ರಹ ಮಾಡಿರುವ ಶ್ರೀಯುತರ ಬಗ್ಗೆ ಒಬ್ಬರು "ಈ ಪರಿಯ ಪುಸ್ತಕ ಪ್ರೇಮ" ಎಂಬ ಪುಸ್ತಕವನ್ನು ಬರೆದಿದ್ದಾರೆ.
ಇದುವರೆಗೆ ಯಾವುದೇ ಸಹಾಯ ಅಸ್ಥ ನೀಡದ ರಾಜ್ಯ ಸರಕಾರ ೨-೧೨-೧೩ ನೆ ಸಾಲಿನ ಬಜೆಟ್ನಲ್ಲಿ ಈ ಒಂದು ಗ್ರಂಥಾಲಯಕ್ಕೆ ೫೦ ಲಕ್ಷ ರುಪಾಯಿಗಳನ್ನು ಮೀಸಲಿಟ್ಟಿದೆ..

ಜೀವಮಾನದಲ್ಲಿ ಇಂಥ ಒಂದು ಸ್ಥಳವನ್ನು ನೋಡಲೇಬೇಕು,ಅಂಕೇಗೌಡರ ಇಂಥ ಒಂದು ಸಾಧನೆಯನ್ನು,ಅವರ ದೀರ್ಘ ತಪಸ್ಸಿನ ಪ್ರತಿಫಲವನ್ನು ಕಣ್ತುಂಬ ನೋಡಲೇಬೇಕು.ದಯವಿಟ್ಟು ಒಮ್ಮೆ ಹೋಗಿ ಬನ್ನಿ,ಅವರ ವಿಳಾಸ ಈ ಕೆಳಗಿನಂತಿದೆ.ಸಾಧ್ಯವಾದರೆ ಆ ಪುಸ್ತಕ ಸಾಗರಕ್ಕೆ ನೀವೂ ಒಂದು ಪುಸ್ತಕವನ್ನು ಕಾಣಿಕೆ ನೀಡಿ.ಇಂತಃ ಒಂದು ಸಮಾಜ ಕಾರ್ಯಕ್ಕೆ ನಮ್ಮಿಂದ ಕೂಡ ಒಂದು ಅಳಿಲು ಸೇವೆ ಆಗಲಿ. 
ಈ ಪುಸ್ತಕದ ಮನೆಯು ಮಂಡ್ಯ ಜಿಲ್ಲೆ,ಪಾಂಡವಪುರ ರೈಲ್ವೆ ನಿಲ್ದಾಣದಿಂದ ಸುಮಾರು ೨ ಕಿಮಿ ದೂರದಲ್ಲಿ,ಮೈಸೂರು-ನಾಗಮಂಗಲ ರಸ್ತೆಯಲ್ಲಿ ಇದೆ..

ಅಂಕೇಗೌಡ ಜ್ಞಾನ ಪ್ರತಿಷ್ಠಾನ,
ಪುಸ್ತಕ ಮನೆ,ಹರಳಹಳ್ಳಿ,
ಪಾಂಡವಪುರ ತಾಲ್ಲೂಕು,ಮಂಡ್ಯ ಜಿಲ್ಲೆ,
ದೂರವಾಣಿ:9242822934.

ಫೋಟೋಗಳು:ಗಿರೀಶ್ ಮತ್ತು ನವೀನ್ 

12 comments:

  1. ಗಿರೀಶ್;ಇಂತಹ ಸಾಧಕರ ಬಗ್ಗೆ ಏನು ಹೇಳೋಣ!!?ಅವರ ಅಘಾದ ವ್ಯಕ್ತಿತ್ವ ನಮ್ಮ ನಿಲುಕಿಗೇ ಸಿಗುವುದಿಲ್ಲ.ಇಂತಹ ಪುಸ್ತಕ ರಾಶಿ,ಅದರ ಹಿಂದಿರುವ ಅವರ ಮತ್ತು ಅವರ ಮನೆಯವರ ಪರಿಶ್ರಮ,ಸಾಧನೆ,ಇವೆಲ್ಲವೂ ನಮ್ಮನ್ನು ಮೂಕ ವಿಸ್ಮಿತರಾಗಿಸುತ್ತದೆ.ನಮ್ಮ ಕರ್ನಾಟಕಕದಲ್ಲೇ ಇರುವ ಅದ್ಭುತಗಳಲ್ಲಿ ಅಂಕೇ ಗೌಡರೂ ಒಬ್ಬರು.ಅವರ ಪುಸ್ತಕ ಪ್ರೇಮ ಅಪರೂಪದ್ದು!೨೦೧೦ರಲ್ಲಿ ಬಾಲಣ್ಣನವರು ನಮ್ಮನ್ನು ಅಲ್ಲಿಗೆ ಕಳಿಸಿದಾಗ ದಂಗಾಗಿ ಹೋದೆ.ಅಂಕೆ ಗೌಡರು 'ಇದು ಯಾವುದೋ ಜನ್ಮದಲ್ಲಿ ಸರಸ್ವತಿ ನನಗೆ ನೀಡಿದ ಶಾಪ ಸರ್'ಎಂದಾಗ ನನ್ನ ಕಣ್ಣುಗಳು ತೇವವಾಗಿದ್ದವೂ.ಅವರು ಸಣ್ಣವರಿದ್ದಾಗ ಎರವಲು ಪಡೆದಿದ್ದ ಪುಸ್ತಕವೊಂದನ್ನು ಹಿಂದಿರುಗಿಸಲು ಸ್ವಲ್ಪ ತಡವಾದಾಗ ಹಿರಿಯರೊಬ್ಬರು 'ಪುಸ್ತಕವನ್ನು ಸರಿಯಾಗಿ ಹಿಂದಕ್ಕೆ ಕೊಡೋಕೆ ಆಗದಿದ್ದರೆ ಪುಸ್ತಕ ಯಾಕೆ ತೆಗೆದುಕೊಂಡುಹೋಗುತ್ತೀರಿ'ಎಂದಿದ್ದರಂತೆ.
    ಆ ಮಾತುಗಳು ಅವರನ್ನು ಪುಸ್ತಕ ಸಂಗ್ರಹಿಸಲು ಪ್ರೇರೇಪಿಸಿತಂತೆ!
    ಪ್ರತಿಯೊಬ್ಬರೂ ಜೀವನದಲ್ಲಿ ನೋಡಲೇ ಬೇಕಾದ ಸ್ಥಳ 'ಪುಸ್ತಕದ ಮನೆ'.ಇಂತಹ ಮಹತ್ ಕಾರ್ಯಕ್ಕೆ ತನ್ನ ಜೀವನವನ್ನೇ ಮುಡಿಪಾಗಿಟ್ಟ ವ್ಯಕ್ತಿಯನ್ನು ಸರ್ಕಾರ ಗೌರವಿಸಿ ಸೂಕ್ತ ಆರ್ಥಿಕ ಸಹಾಯ ನೀಡಲು ಮುಂದಾಗಿರುವುದು ಸಮಾಧಾನ ತಂದಿದೆ.ಆದಷ್ಟು ಬೇಗೆ ಅದು ಕಾರ್ಯ ರೂಪಕ್ಕೆ ಬರಲಿ.ಲೇಖನ ಮತ್ತು ಫೋಟೋಗಳು ತುಂಬಾ ಚೆನ್ನಾಗಿವೆ.ಧನ್ಯವಾದಗಳು.

    ReplyDelete
  2. ಗಿರೀಶ್,
    ನಮ್ಮ ಬ್ಲಾಗಿಗರ ಮೊದಲ ಪ್ರಯತ್ನ ಬ್ಲಾಗವನಕ್ಕೆ ಬೇಟಿ. ಈಗ ಇದು ಎರಡನೇ ಅತ್ಯುತ್ತಮ ಪ್ರಯತ್ನವೆಂದು ನನ್ನ ಭಾವನೆ.
    ನೀವು ಅಲ್ಲಿಗೆ ಬೇಟಿಕೊಟ್ಟ ಅನುಭವವನ್ನು ಚಿತ್ರಗಳ ಸಹಿತ ಉತ್ತಮ ಮಾಹಿತಿಯನ್ನು ಕೊಟ್ಟಿದ್ದೀರಿ. ಬಹುಶಃ ನಿಮ್ಮ ಲೇಖನವನ್ನು ಓದಿದ ಅನೇಕರು ಖಂಡಿತ ಆ ಪುಸ್ತಕ ಮನೆಗೆ ಬೇಟಿಕೊಡುತ್ತಾರೆ...
    ಧನ್ಯವಾದಗಳೂ.

    ReplyDelete
  3. ಗಿರೀಶ್ ಅತ್ಯತ್ತಮ ಮಾಹಿತಿಯನ್ನು ಹೆಕ್ಕಿ ತೆಗೆದು ಅಂಕೆ ಗೌಡರ ವ್ಯಕ್ತಿತ್ವವನ್ನು ಪರಿಚಯಿಸಿದ್ದೀರಿ . ಒಳ್ಳೆಯ ಲೇಖನವನ್ನು ಒಳ್ಳೆಯ ಚಿತ್ರಗಳ ಸಹಿತ ಮನಮೆಚ್ಚಿ ಬರೆದ ನಿಮಗೆ ಪ್ರಣಾಮಗಳು.
    ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]

    ReplyDelete
  4. ಮಾಹಿತಿ ಪೂರ್ಣ ಲೇಖನ ಗಿರೀಶ್ ತುಂಬಾ ಚೆನ್ನಾಗಿ ಬರೆದಿದ್ದೀಯಾ, ಹಾಗೆ ಅಂಕೆಗೌಡ್ರು ಅವರ ಬಗ್ಗೆ ಏನು ಹೇಳುವಂತೆಯೇ ಇಲ್ಲ ಇಂತಹ ಮಹಾನ್ ಹವ್ಯಾಸಿಗರು ಎಲ್ಲಿ ಸಿಕ್ತಾರೆ. ಇಂತಹ ವ್ಯಕ್ತಿ ನಮ್ಮಲ್ಲಿ ಇರುವುದೇ ಒಂದು ಸಂತಸದ ವಿಷಯ. ಈ ಸ್ಥಳವನ್ನು ಎಲ್ಲರೂ ನೋಡಿ ಬರಬೇಕು.

    ReplyDelete
  5. ಅದ್ಭುತ ಮಾಹಿತಿ ಒದಗಿಸಿದ್ದೀರಿ ಗಿರೀಶ್....ತುಂಬಾನೇ ಖುಷಿ ಆಯಿತು.....ನಿಮ್ ಜೊತೆ ಬರೋದು ಸ್ವಲ್ಪದರಲ್ಲೇ ಮಿಸ್ ಆಯಿತು.....ಅದ್ಕೆ ಬೇಜಾರ್ ಆಗ್ತಾ ಇದೆ...ಉತ್ತಮ ಲೇಖನಕ್ಕಾಗಿ ಧನ್ಯವಾದಗಳು...

    ReplyDelete
  6. ಇದು ನಿಜವಾಗಿಯೂ ಅದ್ಭುತ!

    ReplyDelete
  7. ಚಾರಣ ಮಾಡುವಾಗ ನಮಗೆ ಮುಂದಿನ ಗುರಿ ಕಾಣುತ್ತ ಇರುತ್ತದೆ..ಆದ್ರೆ ಅದನ್ನು ಮೆಟ್ಟಿ ನಿಲುವ ಛಲ ನಮದಾಗಿರಬೇಕು..ಅಂತಹ ಮಹಾನ್ ಚಾರಣಿಗರು ನಮ್ಮ ಅಂಕೆ ಗೌಡರು...ಯಾವುದೇ ಅದೇ ತಡೆ ಯಾವುದನ್ನು ಲೆಕ್ಕಿಸದೆ ತಮ್ಮ ಗುರಿ ನಿಸ್ವಾರ್ಥ ಸೇವೆ...ನನ್ನ ಹವ್ಯಾಸ ಉತ್ತಮವಾದದ್ದು ಎನ್ನುವ ಅವರ ಮನಸು ಇಂತಹ ಒಂದು ಅದ್ಭುತವನ್ನು ಸೃಷ್ಟಿಸಿದೆ...ಬರಿ ಕಾವ್ಯಗಳಲ್ಲಿ ಓದಬಹುದಾದ ಸಾಧನೆ ನಮ್ಮ ಕಣ್ಣೆದುರಿಗೆ ಕಾಣುತ್ತದೆ...ಗಿರೀಶ್ ಸುಂದರ ಲೇಖನ ಮಾಹಿತಿ..ಅಪರೂಪದ ಚಿತ್ರಗಳು ಈ ಬ್ಲಾಗನ್ನು ಪ್ರೇಕ್ಷಣೀಯ ಸ್ಥಳ ಮಾಡಿದೆ..ನಮನಗಳು...

    ReplyDelete
  8. ಒಳ್ಳೆಯ ಮಾಹಿತಿ ಗಿರೀಶ್.. ಚೆನ್ನಾಗಿದೆ

    ReplyDelete
  9. ತುಂಬ ಒಳ್ಳಯ ಬರಹ ಗಿರೀಶ್...

    ReplyDelete
  10. ಅಧ್ಬುತವನ್ನೇ ಸೃಷ್ಟಿಸಿರುವ ಮಾನ್ಯರಿಗೆ ನಮನಗಳು. ಒಳ್ಳೆಯ ಮಾಹಿತಿ.

    ReplyDelete
  11. ಉತ್ತಮ ಮಾಹಿತಿ ........:)

    ReplyDelete