Monday, June 17, 2013

ಮಲ್ಲಕಂಭ ಪ್ರವೀಣರ ಊರೇ ಮಲ್ಲಾಪುರ !!!

ನನ್ನ ಊರು ಸುಂದರ ಕಲೆಗಳ ತವರೂರು,ಶಿಲ್ಪಕಲೆಗಳ ಬೀಡು ಹಳೇಬೀಡಿಗೆ ಕಾಲ್ನಡಿಗೆಯ ದೂರದಲ್ಲಿರುವ ಸಿದ್ದಾಪುರ ಎಂಬುದು.. ನನ್ನ ಹಳ್ಳಿಗೆ,ಈ ಹೆಸರು ಹೇಗೆ ಬಂತು ಎಂಬುದು ಸರಿಯಾಗಿ ತಿಳಿದಿಲ್ಲ ,ಆದರ ಹೊಯ್ಸಳರು ಆಳಿದ ಹಳೇಬೀಡು ಮತ್ತು ಸುತ್ತಮುತ್ತಲ ಕೆಲವು ಊರುಗಳ ಬಗ್ಗೆ ವಿಶ್ಲೇಷಣೆ ಕೊಡ ಬಯಸುತ್ತೇನೆ..

ಹಳೆಬೀಡಿನ ಇನ್ನೊಂದು ಹೆಸರು ದ್ವಾರಸಮುದ್ರ ಎಂದು .. ಇಲ್ಲಿ ಹೊಯ್ಸಳರಿಗಿಂತ ಮುಂಚೆ ರಾಷ್ಟಕೂಟರು ಸಾವಿರಾರು ಹೆಕ್ಟೇರುಗಳಷ್ಟು ದೊಡ್ಡದಾದ ಒಂದು ಕೆರೆಯನ್ನು ನಿರ್ಮಿಸಿದ್ದರು .. ಅದು ಸಮುದ್ರದಷ್ಟು ವಿಶಾಲವಾಗಿತ್ತು .. ನಂತರ ಈ ಊರು ಹೊಯ್ಸಳರ ರಾಜಧಾನಿ ಆಯಿತು.. ರಾಜಧಾನಿ ಅಂದರೆ ಅವರ ಆಡಳಿತದ ಮತ್ತು ರಾಜ್ಯದ ಹೆಬ್ಬಾಗಿಲು ಇದ್ದ ಹಾಗೆ.. ಆಗಾಗಿ ಇದಕ್ಕೆ ದ್ವಾರಸಮುದ್ರ ಎಂಬ ಹೆಸರು ಬಂತು ..ನಂತರ ಮಲ್ಲಿಕಾಫ಼ರ್ ನ ದಂಗೆಯಿಂದ ಇಡೀ ಊರು ಚೆಲ್ಲಾಪಿಲ್ಲಿಯಾಗಿ ಹಾಳಾಗಿ ಹೋಯಿತು.. ಕ್ರಮೇಣ ಇದು ಜನರ ಬಾಯಲ್ಲಿ ಹಾಳಾದ ಬೀಡು, ಹಳೆಯ ಬೀಡು ಹೀಗೆ ಒಬ್ಬರಿಂದ ಒಬ್ಬರಿಗೆ ತಲುಪಿ ಹಳೇಬೀಡು ಎಂದಾಯಿತು ಎಂದು ವಿಶ್ಲೇಷಿಸುತ್ತಾರೆ ..
 
ಹೊಯ್ಸಳರ ಲಾಂಛನ

 
ಇದೆ ರೀತಿ ಹಳೆಬೀಡಿನ ಸುತ್ತಮುತ್ತಲ ಕೆಲವು ಗ್ರಾಮಗಳ ಬಗ್ಗೆ ಒಂದು ಇಣುಕು ನೋಟ .. ಹಳೇಬೀಡಿಗೆ ಹೊಂದಿಕೊಂಡೇ ಇರುವ ಗ್ರಾಮ ಬಸ್ತಿಹಳ್ಳಿ .. ಇಲ್ಲಿ ಸಧ್ಯ ೫ ಜೈನ ತೀರ್ಥಂಕರರ ಬಸದಿಗಳಿವೆ .. ಮೂಲತಃ ಜೈನರಾಗಿದ್ದ ಹೊಯ್ಸಳರು ನಿರ್ಮಿಸಿದ್ದ ಬಸದಿಗಳು ಇವು .. ಇದಕ್ಕೂ ಮುಂಚೆ ಇಲ್ಲಿ ನೂರಾರು ಬಸದಿಗಳು ಇದ್ದವು ಎಂದು ಕೆಲವು ಸಂಶೋಧಕರು ಅಭಿಪ್ರಾಯ ಪಡುತ್ತಾರೆ .. ಬಸದಿಗಳ ಹಳ್ಳಿ ಎಂಬುದು ಕ್ರಮೇಣ ಬಸ್ತಿಹಳ್ಳಿ ಆಯಿತು ...
 
ಜೈನ ಬಸದಿ

 
ಹಳೇಬೀಡಿನಿಂದ ೯ ಕಿಲೋಮೀಟರ್ ದೂರದಲ್ಲಿರುವ ಊರು ಅಡಗೂರು... ಇಲ್ಲಿ ಈಗಲೂ ಹೊಯ್ಸಳರು ಕಟ್ಟಿದ್ದ ಕೋಟೆ,ಬಸದಿಗಳು ಇವೆ ..ಇಲ್ಲಿರುವ ಕೋಟೆಯಲ್ಲಿ ಮದ್ದು,ಗುಂಡುಗಳನ್ನು ಅಡಗಿಸಿ ಇಡುತ್ತಿದ್ದರಂತೆ ..ಮತ್ತು ಇಲ್ಲಿ ಯುದ್ಧಕ್ಕೆ ತಯಾರಿ ಕೂಡ ನೆಡೆಸುತ್ತಿದ್ದರು .... ಅಡಗಿಸಿಡುವ ಊರು,ಅಡಗೂರು ಎಂದಾಯಿತು ..

ಹೊಯ್ಸಳರ ರಾಜರ ಸಿರಿ,ಸಂಪತ್ತು,ವೈಡೂರ್ಯಗಳನ್ನು ಸಂಗ್ರಹಿಸಿ ಇಡುತ್ತಿದ್ದ ಊರು ರಾಜನಶಿರಿಯೂರು(ರಾಜನ+ಸಿರಿಯ +ಊರು ) ಎಂದಾಯಿತು ...
ಈ ಊರಿನ ಪಕಕ್ದಲ್ಲೇ ಇರುವ ಇನ್ನೊಂದು ಊರು ಮಲ್ಲಾಪುರ ಎಂದು .. ಇದು ಮಲ್ಲ ಕಂಭ ಪ್ರವೀಣರು ಇದ್ದಂತಹ ಊರು .. ಇಲ್ಲಿ ಹೊಯ್ಸಳರ ಕಾಲದಲ್ಲಿ ಮಲ್ಲ ಕಂಭ ಗಾರುಡಿಗರು ಇದ್ದರು ಎಂಬುದಕ್ಕೆ ಇಲ್ಲಿ ದೊರೆತಿರುವ ಮಲ್ಲ ಕಂಭಗಳು ಮತ್ತು ಗರಡಿ ಮನೆಗಳೇ ಸಾಕ್ಷಿ .. ಮತ್ತು ಇಲ್ಲಿನ ಗ್ರಾಮ ಪಂಚಾಯಿತಿ ಕೂಡ ಈ ನಿಟ್ಟಿನಲ್ಲಿ ಈ ಗ್ರಾಮದಲ್ಲಿ ಇತಿಹಾಸದ ಪುನರಾವರ್ತನೆ ಮಾಡುವಂತೆ ಮಲ್ಲ ಕಂಭ ಮತ್ತು ಗರಡಿ ಮನೆಗಳನ್ನುಅಭಿವೃದ್ಧಿ ಪಡಿಸಲು ಕೆಲವು ಯೋಜನೆಗಳನ್ನು ಕೈಗೊಂಡಿದೆ ..

ಇನ್ನು ಹಳೇಬೀಡಿನಿಂದ ಸುಮಾರು ೩-೪ ಕಿಲೋಮೀಟರ್ ದೂರದಲ್ಲಿರುವ ಊರುಗಳು ಪಂಡಿತನಹಳ್ಳಿ ಮತ್ತು ಭಂಡಾರಿಕಟ್ಟೆ .. ಹೊಯ್ಸಳರ ಆಸ್ಥಾನದ ಪಂಡಿತರುಗಳು ನೆಲೆಸಿದ್ದ ಊರು ಪಂಡಿತನಹಳ್ಳಿ .. ಇಲ್ಲಿ ಈಗಲೂ ಕೆಲವು ಪಂಡಿತರ ವಂಶ ಇದೆ ..
ಹಾಗೆ ಭಂಡಾರಿಗಳು,ಅಂದರೆ ಕ್ಷೌರಿಕರು ಇದ್ದಂತಹ ಊರು ಭಂಡಾರಿಕಟ್ಟೆ ..
ಹಳೇಬೀಡು ಸುತ್ತಮುತ್ತಲ ಕೆಲವು ಹಳ್ಳಿಗಳಿಗೆ ಈ ರೀತಿಯ ಇತಿಹಾಸದ ಹಿನ್ನೆಲೆ ಇದೆ ..

(ಈ ಲೇಖನವು ಜೂನ್ ೨೦, ೨೦೧೩ ರ "ಹಾಯ್ ಬೆಂಗಳೂರು" ಪತ್ರಿಕೆಯಲ್ಲಿ "ದಿಲ್ ನೆ ಫಿರ್ ಯಾದ್ ಕಿಯಾ" ಅಂಕಣದಲ್ಲಿ ಪ್ರಕಟಗೊಂಡಿದೆ .
'ನಿಮ್ಮ ಊರಿಗೆ ಹೆಸರು ಹೇಗೆ ಬಂತು?' ಎಂಬ ಶೀರ್ಷಿಕೆಯಲ್ಲಿ ಲೇಖನಗಳನ್ನು ಆಹ್ವಾನಿಸಲಾಗಿತ್ತು.  ಲೇಖನ ಪ್ರಕಟಿಸಿದ ಪತ್ರಿಕಾ ಬಳಗಕ್ಕೆ ಮನಃ ಪೂರ್ವಕ ಧನ್ಯವಾದಗಳು ) 

Tuesday, April 23, 2013

ಸೂತಕದ ಛಾಯೆ !!!

ತಾಯಿ ಭ್ರೂಣದಿಂದ
ಹೊರಬಂದ ಹಸುಗೂಸು
ಪಾಪ,
ಏನೂ ತಿಳಿದಿರದು, ದೇವರಂತ ಮನಸು
ಹೊಸ ಜಗತ್ತಿನೊಳ್ ಬಿಟ್ಟಿತು ಕಣ್ಣ
ಅದಕ್ಕೂ ಅಂಟಿಸಿದರು ಸೂತಕದ ಹೂರಣ.
ಓ ಮೂಢ,ಜನನ ಸೂತಕ ಅಲ್ಲ
ಅದು ಹೊಸ ಜೀವದ ಮೊದಲ ಉಸಿರು

ಮುಟ್ಟು ಕಂಡವಳನ್ನು ಹೊರಗಿರಿಸಿದಿರಿ,
ದೇವರ ಕೋಣೆಗೂ ಕಾಲಿರಿಸದಂತೆ
ಸ್ತೋತ್ರವ ಪಠಿಸದಂತೆ..
ಕಾಣುವಿರಿ ಪಶುವಿನಂತೆ..
ಮುಟ್ಟು ನಿಲ್ಲದ ಹೊರತು
ಹುಟ್ಟದು ಇನ್ನೊಂದು ಜೀವ.
ಓ ಮೂಢ,ರಜ ಸೂತಕ ಅಲ್ಲ
ಅದೊಂದು ಜೈವಿಕ ಕ್ರಿಯೆ

ಹೆಣದ ಮೇಲಿನ ಒಡವೆಯ ಧರಿಸುವಿರಿ,
ಹೆಣಕ್ಕೂ ನೀರೆರೆಯುವಿರಿ,
ಪೂಜೆಯ ಗೈಯ್ಯುವಿರಿ, ಉಸಿರಿಲ್ಲದ ದೇಹಕ್ಕೂ....
ವಿಗ್ರಹಕ್ಕೂ ಮಿಗಿಲಾಗಿ ಅಲಂಕರಿಸುವಿರಿ...
ಆದರೂ ಮನದ ಮೂಲೆಯಲ್ಲಿ ಸೂತಕದ ಬಿಂಬ
ಓ ಮೂಢ, ಸಾವು ಸೂತಕ ಅಲ್ಲ
ಅದು ಅವನ ಅಂತ್ಯ

ಓ ಮರುಳ ಮನಸೇ,
ಜನನ ಸೂತಕವಲ್ಲ
ರಜ ಸೂತಕವಲ್ಲ
ಸಾವು ಸೂತಕವಲ್ಲ
ಇವೆಲ್ಲ ಪ್ರಕೃತಿಯ ನಿಯಮವಷ್ಟೇ ...
ಸೂತಕ ಸೂತಕ ಎನ್ನುವ ನಿನ್ನ ಮನಸೇ ಸೂತಕ ನೋಡಾ !!!

Friday, April 5, 2013

ಮತ್ತೆ ಮತ್ತೆ ತೇಜಸ್ವಿ !!!

ಏಪ್ರಿಲ್ ೫,ಪೂರ್ಣಚಂದ್ರ ತೇಜಸ್ವಿ ಅವರ ಸಂಸ್ಮರಣಾ ದಿನ ... ಈ ದಿನದ ಅಂಗವಾಗಿ "ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಜೀವ ವೈವಿಧ್ಯ ಸಂಶೋಧನಾ ಕೇಂದ್ರ ಮತ್ತು ವಿಸ್ಮಯ ಪ್ರತಿಷ್ಠಾನ,ಕೊಟ್ಟಿಗೆಹಾರ" ಸಂಸ್ಥೆಯು ಒಂದು ದಿನದ ಚಾರಣ ಕಾರ್ಯಕ್ರಮವನ್ನು ಮೂಡಿಗೆರೆ ತಾಲ್ಲೂಕಿನ ಕುಂದೂರು ಬಳಿಯ ಬೇಟೆರಾಯನಕೋಟೆಯಲ್ಲಿ ಮಾರ್ಚ್ ೨೯,೨೦೧೩ ರಂದು  ಹಮ್ಮಿಕೊಂಡಿತ್ತು...
ಕೊಟ್ಟಿಗೆಹಾರದ ವಿಸ್ಮಯ ಪ್ರತಿಷ್ಠಾನದ ಕಛೇರಿಯಲ್ಲಿ ತೇಜೋಮಯ ತೇಜಸ್ವಿ


ಈ ಚಾರಣ ಕಾರ್ಯಕ್ರಮಕ್ಕೆ ನಾಡಿನ ವಿವಿದೆಡೆಯಿಂದ ಚಾರಣ ಪ್ರಿಯರು,ಪರಿಸರ ಪ್ರಿಯರು,ಛಾಯಾಗ್ರಾಹಕರು,ವಿಸ್ಮಯ ಪ್ರತಿಷ್ಠಾನದ ಸದಸ್ಯರು,ತೇಜಸ್ವಿ ಅವರ ಸ್ನೇಹಿತರು ಮತ್ತು ಒಡನಾಡಿಗಳು ಮತ್ತು ತೇಜಸ್ವಿ ಅವರ ಅಭಿಮಾನಿಗಳು ಭಾಗವಹಿಸಿದ್ದರು.. ಈ ಕಾರ್ಯಕ್ರಮವು ಬೆಳಗ್ಗೆ ಮೂಡಿಗೆರೆ ಇಂದ ಹೊರಟು  ಕುಂದೂರು ತಲುಪಿ ಅಲ್ಲಿಂದ ಬೇಟೆರಾಯನಕೋಟೆಗೆ ನಮ್ಮ ತಂಡ  ಸಾಗಿತು..


ಬೇಟೆರಾಯನಕೋಟೆ
ಬೇಟೆರಾಯನಕೋಟೆ: ಇದು ಪಶ್ಚಿಮ ಘಟ್ಟದ ಸಾಲಿನಲ್ಲಿ ಬರುವ ಒಂದು ಪ್ರದೇಶ ... ಇಲ್ಲಿ ಮುಂಚೆ ಒಬ್ಬ ಪಾಳೆಗಾರ ಆಳುತ್ತಿದ್ದನು ಎಂಬ ಮಾಹಿತಿ ಇದೆ .. ಹೊಯ್ಸಳರ ಮೂಲ ಕೂಡ ಪಶ್ಚಿಮ ಘಟ್ಟದ ಪ್ರದೇಶ ಆದ್ದರಿಂದ ಈ ಕೋಟೆಯೂ ಕೂಡ ಹೊಯ್ಸಳರ ಆಳ್ವಿಕೆಯಲ್ಲಿ ಕಟ್ಟಲ್ಪಟ್ಟಿರಬಹುದು .. ಇದೆ ಬೆಟ್ಟಗಳ ಸಾಲಿನಲ್ಲಿ ಬರುವ ಬಲ್ಲಾಳರಾಯನದುರ್ಗದಲ್ಲಿರುವ ಕೋಟೆ  ಕೂಡ ಹೊಯ್ಸಳರ ದೊರೆ ನರಸಿಂಹ ಬಲ್ಲಾಳ ಕಟ್ಟಿಸಿದ್ದು .. ಆಗಾಗಿ ಇದು ಕೂಡ ಅವರ ಕೆಳಗಿದ್ದ ಯಾರಾದರು ಪಾಳೆಗಾರ ಕಟ್ಟಿಸಿರಬಹುದು ಎಂದು ಊಹಿಸಬಹುದು ಅಷ್ಟೇ ..ಸಧ್ಯದ ಪರಿಸ್ಥಿತಿಯಲ್ಲಿ ಇಲ್ಲಿ ಕೋಟೆಯ ಕುರುಹು ಕಾಣುತ್ತದೆ ಅಷ್ಟೇ ...

ಅಂದ ಹಾಗೆ ಇಲ್ಲಿ ಇತ್ತೀಚಿಗೆ ಆನೆಗಳ ಹಾವಳಿ ಕೂಡ ಜಾಸ್ತಿ ಎಂದು ಸ್ಥಳೀಯರು ಹೇಳಿದರು ...
ಚಾರಣದ ಹಾದಿಯಲ್ಲಿ

ಬೇಟೆರಾಯನಕೋಟೆಯಿಂದ ಕಾಣುವ ಸುತ್ತಮುತ್ತಲ ಗುಡ್ಡಗಳು
 
ಈ ಚಾರಣ ಕಾರ್ಯಕ್ರಮವನ್ನು ಏರ್ಪಡಿಸಿದ್ದ ವಿಸ್ಮಯ ಪ್ರತಿಷ್ಠಾನಕ್ಕೆ ಮನಃ ಪೂರ್ವಕ ಅಭಿನಂದನೆಗಳು ಮತ್ತು ತೇಜಸ್ವಿ ಬದುಕು-ಬರಹ ಚಿಂತನೆಗಳನ್ನು ಪಸರಿಸಲು ಅವರು ಹಮ್ಮಿಕೊಳ್ಳುತ್ತಿರುವ ಎಲ್ಲ ಕಾರ್ಯಕ್ರಮಗಳು ಮತ್ತು ಸಂಸ್ಥೆಯ ಆಶಯಗಳಿಗೆ ಶುಭ ಕೋರುತ್ತೇನೆ.. ಅಲ್ಲದೆ ತೇಜಸ್ವಿ ಬರಹಗಳ ಬಗ್ಗೆ ಚರ್ಚೆಗಳನ್ನು ಕೂಡ ಹಲವಾರು ಶಾಲಾ ಕಾಲೇಜುಗಳಲ್ಲಿ ಹಮ್ಮಿಕೊಳ್ಳುತ್ತಿರುವುದು ನಿಜಕ್ಕೂ ಶ್ಲಾಘನೀಯ...



Photos:Darshan Shindhe

Thursday, March 28, 2013

ಬಳಲಿದ ಕಾಯ !!!

ಮಳೆ ನೀರು ಸೋರುವ ಗುಡಿಸಲು,
ಒಲೆ ಮುಂದೆ ಕುಳಿತ ಒಣ ದೇಹ ,
ಗಂಜಿ ಬೇಯಿಸಲು ಒಲೆ ಹಚ್ಚಲೂ ಇರದ ಶಕ್ತಿ,
ಕಬ್ಬಿಣದಂತಿಹ ಆಕೆಯ ಎಲುಬುಗಳು
ಬತ್ತಿ ಹೋಗಿರುವ ಎದೆ ಹಾಲು
ರವಿಕೆಯಿಂದ ಮೊಲೆಗಳು ಹೊರ ಇಣುಕಿದ್ದರೂ,
ಸೆರಗು ಎಳೆಯಲಾರದಷ್ಟು ಇಲ್ಲದ ಪ್ರಜ್ಞೆ..
ಹಸಿದ ಮಗುವಿನ ಚಿಂತೆಯಲಿ
ಇನ್ನೂ ಬಾರದ ಗಂಡನ ಕಾಯುವಿಕೆಯಲಿ..


ಹೊರಗೆ ಮಲಗಿರುವ ಹಸುಗೂಸು,
ಬಳ್ಳಿಗೂ ಸಾಟಿ ಎಂಬಂತೆ ಒಣಗುತ್ತಿಹುದು,
ಹಸಿವು ತಾಳಲಾರದ ಆಕ್ರಂದನ,
ಎದೆ ಹಾಲಿನ ರುಚಿಯೂ ತಿಳಿಯದ ಬಡ ಕೂಸು,
ಬಲಿತಿರದ ನಾಲಗೆಯಲ್ಲಿ ಹಸಿವನ್ನು,
ಅಳದೆ ಹೇಗೆ ಬಣ್ಣಿಸಿತು ?


ಅಳಲು ತಾಯಿಯ ಹೃದಯ ಮುಟ್ಟಿತೇ ಹೊರತು
ಸಂತೆ ಬೀದಿಯ ಹೆಂಡದಂಗಡಿಯಲ್ಲಿ
ಶರಾಬು ಕುಡಿದು,
ಹೆಂಡತಿ ಮಗುವಿನ ಚಿಂತೆಯಿಲ್ಲದೆ
ಊರೊರಗಿನ ತೋಟದ ಮನೆಯಲ್ಲಿ,
ಸೂಳೆಯ ಮಗ್ಗುಲಲಿ ಮಲಗಿರುವ
ಹುಟ್ಟಿಸಿದಾತನ ಕಲ್ಲು ಹೃದಯವನಲ್ಲ...